ಮೈಸೂರು: ಮೈಸೂರಿನಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಮನೆಗೆ ಕಲ್ಲು ಎಸೆದ
ಆರೋಪಿ ಶಿವಮೂರ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಗರದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಪೊಲೀಸರು ಶಿವಮೂರ್ತಿಯನ್ನು ಮೈಸೂರಿನ 3ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ನಂತರ ಶಿವಮೂರ್ತಿಯನ್ನ ನ್ಯಾಯಾಂಗ ಬಂಧನಕ್ಕೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಕಲ್ಲು ಎಸೆದು ಮೈಸೂರು ಹೊರವಲಯದಲ್ಲಿ ತಲೆ ಮರೆಸಿಕೊಂಡಿದ್ದ ಶಿವಮೂರ್ತಿಯನ್ನ
ಸರಸ್ವತಿಪುರಂ ಇನ್ಸ್ಪೆಕ್ಟರ್ ರವೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ
ವಶಕ್ಕೆ ಪಡೆಯಲು ಹೋದಾಗ ಆತ ಪೊಲೀಸರ ಮೇಲೂ ಹಲ್ಲೆ ನಡೆಸಿದ್ದ.
ಸಬ್ ಇನ್ಸಪೆಕ್ಟರ್ ಮಹೇಂದ್ರ ಹಾಗೂ ಇತರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.ನಂತರ
ಸಿನಿಮೀಯ ರೀತಿಯಲ್ಲಿ ಆರೋಪಿ ಶಿವಮೂರ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.
ರೈತರ ಸಾಲ ಮನ್ನಾ ಮಾಡಿದಂತೆ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ ಪ್ರಕರಣಗಳನ್ನ ಮನ್ನಾ ಮಾಡುವಂತೆ ಮನವಿ ನೀಡಲು ಶನಿವಾರ ಸಿದ್ದರಾಮಯ್ಯ ಮನೆಗೆ ತೆರಳಿದ್ದೆ.
ಸಂಜೆ 4 ಗಂಟೆ ಆದರೂ ಸಿದ್ದರಾಮಯ್ಯ ಮನವಿ ಸ್ವೀಕರಿಸಲು ಬರಲಿಲ್ಲ. ಮನೆಗೆ ಕಲ್ಲು ಹೊಡೆದರೆ ಸಿದ್ದರಾಮಯ್ಯ ನನ್ನನ್ನೇ ಕರೆಸಿಕೊಳ್ಳುತ್ತಾರೆ ಎಂದು ಭಾವಿಸಿ ಕಲ್ಲು ಹೊಡೆದೆ ಎಂದು ಆರೋಪಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.

