ತುಮಕೂರು: ಜೆಡಿಎಸ್ ಭವಿಷ್ಯದ ಬಗ್ಗೆ ಯಾರು ತಲೆ ಕೆಡಿಸಕೊಳ್ಳಬೇಕಾಗಿಲ್ಲ, ಸುಭದ್ರವಾಗಿದೆ ಅದು ಕಾರ್ಯಕರ್ತರ ಕೈಯಲ್ಲಿದೆ ಎಂದು ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.
ತುಮಕೂರಿನ ಚಿಕ್ಕನಾಯಕನಹಳ್ಳಿಯ ಬುಕ್ಕಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಎರಡನೇ ದಿನದ ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ನಮ್ಮ ಪಕ್ಷದಲ್ಲಿ ನಾಯಕರನ್ನು ಬೆಳಸುವಂತಹ ಕಾರ್ಯಕರ್ತರಿದ್ದಾರೆ. ಎಷ್ಟೋ ಜನ ದೊಡ್ಡ ದೊಡ್ಡ ನಾಯಕರು ನಮ್ಮ ಪಕ್ಷದಿಂದ ಬೆಳೆದು ಬೇರೆ ಪಕ್ಷಕ್ಕೆ ಹೋಗಿರುವ ಇತಿಹಾಸ ಇದೆ. ನಾಯಕರ ಫ್ಯಾಕ್ಟರಿಯನ್ನೇ ಸೃಷ್ಟಿ ಮಾಡುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ ಎಂದು ಜೆಡಿಎಸ್ ಬಗ್ಗೆ ಮಾತನಾಡುವವರಿಗೆ ತಿರುಗೇಟು ನೀಡಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಸಾಲಕ್ಕೆ ಸಿಲುಕಿದೆಯೆ ಎಂಬ ಮಾಧ್ಯಮದವರ ಪ್ರಶ್ನೆಗೆ, ಯಾವುದಾದರೂ ಉಪಚುನಾವಣೆ ಮತ್ತು ಎಂಪಿ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ. ಆಗ ಗ್ಯಾರಂಟಿ ಹಣ ಹಾಕ್ತಾರೆ,ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ಲೂಟಿ ಹೊಡೆಯುತ್ತಿದೆ ಎಂದು ಕಿಡಿಕಾರಿದರು.
ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅವರ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆಯನ್ನ ಪ್ರತಿ ತಿಂಗಳು ಕೊಡುವುದಾಗಿ ಮಾತು ಕೊಟ್ಟಿದ್ದರು,ಆದರೆ ಇವತ್ತು ಸಮರ್ಪಕವಾಗಿ ರಾಜ್ಯದ ಜನತೆಗೆ ಐದು ಗ್ಯಾರಂಟಿ ಯೋಜನೆ ಹೋಗ್ತಿಲ್ಲ ಎಂದು ಅವರು ಆರೋಪಿಸಿದರು.
ಗ್ಯಾರಂಟಿ ಕೊಡುವುದು ತಪ್ಪು ಅಂತ ಹೇಳ್ತಿಲ್ಲ. ಗ್ಯಾರಂಟಿ ಜೊತೆಗೆ ಅಭಿವೃದ್ದಿ ಮಾಡಲಿ,ಆದರೆ ರಾಜ್ಯ ಅಭಿವೃದ್ಧಿ ಕಾಣುತ್ತಿಲ್ಲ. ಕಳೆದ ಎರಡು ವರ್ಷದಲ್ಲಿ ಎಷ್ಟು ಶಾಸಕರಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಎಂದು ನಿಖಿಲ್ ಪ್ರಶ್ನಿಸಿದರು.
ಜನರೊಂದಿಗೆ ಜನತಾದಳ ಅಭಿಯಾನವನ್ನ ರಾಜ್ಯವ್ಯಾಪಿ ಎರಡನೇ ದಿನಕ್ಕೆ ಕಾಲಿಟ್ಟಿದ್ದೇವೆ. ವಿಶೇಷವಾಗಿ ಬುಕ್ಕಾಪಟ್ಟಣ ಜನತಾದಳ ಪಕ್ಷಕ್ಕೆ ಆಶೀರ್ವಾದ ಮಾಡಿದ ಕ್ಷೇತ್ರ. ಈಗಾಗಲೇ ಸದಸ್ಯತ್ವ ನೋಂದಣಿ ರಾಜ್ಯವ್ಯಾಪಿ ನಡೆಯುತ್ತಿದೆ. ಈಗಾಗಲೇ1.50 ಲಕ್ಷ ಜನ ಪಕ್ಷದ ಸಕ್ರಿಯ ಸದಸ್ಯರಾಗಿದ್ದಾರೆ. ಇಡೀ ರಾಜ್ಯದ ಜನತೆ ನಮ್ಮ ಪಕ್ಷದ ಕಾರ್ಯಕರ್ತರು ಉತ್ಸಾಹಕತೆಯಿಂದ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಅಭಿಯಾನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕ ಎಂ.ಟಿ ಕೃಷ್ಣಪ್ಪ,ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪೇಸ್ವಾಮಿ, ಶಿರಾ ಉಗ್ರೇಶ್, ತುಮಕೂರು ಜಿಲ್ಲಾಧ್ಯಕ್ಷ ಅಂಜಿನಪ್ಪ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರು,ಎಸ್.ಆರ್ ಗೌಡ ಸೇರಿದಂತೆ ಹಲವು ಪ್ರಮುಖ ಮುಖಂಡರು ಪಾಲ್ಗೊಂಡಿದ್ದರು.