ಮೋದಿಯವರಿಗೆ ವಿಶ್ವದಲ್ಲಿ ಸಿಗುತ್ತಿರುವ ಗೌರವ ಸಹಿಸದ ಕಾಂಗ್ರೆಸ್-ಅಶೋಕ್ ಕಿಡಿ

ಬೆಂಗಳೂರು: ರಾಷ್ಟ್ರಸೇವೆಯನ್ನೇ ಧ್ಯೇಯವನ್ನಾ ಗಿಸಿಕೊಂಡು ಕರ್ಮಯೋಗಿಯಂತೆ ಶ್ರಮಿಸುತ್ತಿರುವ ಮೋದಿ ಅವರಿಗೆ ವಿಶ್ವದೆಲ್ಲೆಡೆ
ಸಿಗುತ್ತಿರುವ ಗೌರವ ಸಹಿಸದ ಕಾಂಗ್ರೆಸ್ ನಾಯಕರು ಹತಾಶೆಯಿಂದ ನಿಂದಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಅಶೋಕ್ ಟೀಕಿಸಿದ್ದಾರೆ.

ಹಿಂದುಳಿದ ಸಮುದಾಯದ ಅಪಾರ ಜನಪ್ರಿಯತೆ, ವಿಶ್ವದೆಲ್ಲೆಡೆ ಅವರಿಗೆ ಸಿಗುತ್ತಿರುವ ಅಭೂತಪೂರ್ವ ಗೌರವ, ಸನ್ಮಾನಗಳನ್ನು ಸಹಿಸದ ಕಾಂಗ್ರೆಸ್ ನಾಯಕರು ಹತಾಶೆಯಿಂದ ಮೋದಿ ಅವರ ಮೇಲೆ ವೈಯಕ್ತಿಕ ನಿಂದನೆ ಮಾಡುತ್ತಾ ಬಂದಿರುವುದು ಹೊಸದೇನಲ್ಲ ಎಂದು ಟ್ವೀಟ್ ಮಾಡಿ ಅಶೋಕ್ ವ್ಯಂಗ್ಯ ವಾಡಿದ್ದಾರೆ.

ಸೋನಿಯಾ ಗಾಂಧಿ ಆದಿಯಾಗಿ ಕಾಂಗ್ರೆಸ್ ಶಾಸಕರವರೆಗೂ ಅನೇಕರು ‘ಮೌತ್ ಕಿ ಸೌದಾಗರ್’ ‘ರಾವಣ’, ‘ನೀಚ ವ್ಯಕ್ತಿ’, ‘ಚಹಾ ಮಾರುವವನು’, “ಮೋದಿ ಮೋದಿ ಎನ್ನುವ ಯುವಕರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು”, ‘ವಿಷಸರ್ಪ’ ಎಂದೆಲ್ಲಾ ಮೋದಿ ಅವರನ್ನು ನಿಂದಿಸಿ ಕಾಂಗ್ರೆಸ್ ಪಕ್ಷದ ನೀಚ ಸಂಸ್ಕೃತಿಯನ್ನು ಪ್ರದರ್ಶನ ಮಾಡುತ್ತಲೇ ಇದ್ದಾರೆ ಎಂದು ಕಟುವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಡಂ ಸೋನಿಯಾ ಗಾಂಧಿ ಹಾಕಿಕೊಟ್ಟ ಈ ಮೇಲ್ಪಂಕ್ತಿಯನ್ನ, ಈ ನೀಚ ಪರಂಪರೆಯನ್ನ ಮುಂದುವರೆಸುವುದೇ ತನ್ನ ಕರ್ತವ್ಯ ಎಂಬಂತೆ ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರು ನಿನ್ನೆ ಮೈಸೂರಿನ ಸಾಧನಾ ಸಮಾವೇಶದಲ್ಲಿ ಮೋದಿ ಅವರು ‘ಬೊಗಳುತ್ತಾರೆ’ ಎಂಬ ಅವಾಚ್ಯ ಶಬ್ಧ ಬಳಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಕೀಳು ಮನಸ್ಥಿತಿಯನ್ನು ಸ್ವಯಂ ಬಯಲು ಮಾಡಿದ್ದಾರೆೆ ಎಂದು ಹೇಳಿದ್ದಾರೆ.

ಸ್ವಾಮಿ ಖರ್ಗೆ ಅವರೇ, ನಿಮ್ಮ ಮೇಡಂ ಸೋನಿಯಾ ಗಾಂಧಿ ಅವರು ಮೋದಿ ಅವರು ಗುಜರಾತ್ ಮುಖ್ಯಮಂತ್ರಿಗಳಾಗಿದ್ದಾಗ ‘ಮೌತ್ ಕಾ ಸೌದಾಗರ್’ ಎಂದಿದ್ದರು. ಅದಾದ ಮೇಲೆ ಮೋದಿ ಅವರು ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿ ಈಗ ಮೂರನೇ ಅವಧಿಗೆ ಪ್ರಧಾನಿಗಳಾಗಿದ್ದರೆ. ನಿಮ್ಮ ನಿಂದನೆ, ಬೈಗುಳಗಳು ನಿಮಗೇ ತಿರುಗುಬಾಣ ಆಗುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ನಿಮಗೆ ಇನ್ನೂ ಎಷ್ಟು ವರ್ಷ ಬೇಕು ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ತಾವು ಹಿರಿಯರು, ರಾಜಕಾರಣದಲ್ಲಿ ವಿರೋಧಿಗಳನ್ನು ಹೇಗೆ ಸಂಬೋಧನೆ ಮಾಡಬೇಕು, ವಿರೋಧಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದಕ್ಕೆ ತಮ್ಮ ನಡೆ-ನುಡಿಗಳ ಮೂಲಕ ತಾವು ಕಿರಿಯರಿಗೆ ಮಾದರಿಯಾಗಬೇಕು. ಅದು ಬಿಟ್ಟು ಹಿರಿಯರಾಗಿ ನೀವೇ ಈ ರೀತಿ ಪದೇ ಪದೇ ದೇಶದ ಪ್ರಧಾನಿಗಳನ್ನು ನಿಂದನೆ ಮಾಡಿದರೆ ಅದು ನಿಮಗೆ ಶೋಭೆ ತರುವುದಿಲ್ಲ ಎಂದು ಕುಟುಕಿದ್ದಾರೆ.

ಮೋದಿ ಅವರ ನೇತೃತ್ವದಲ್ಲಿ ಭಾರತ ವಿಶ್ವ ಮಟ್ಟದಲ್ಲಿ ಘರ್ಜನೆ ಮಾಡುತ್ತಿದೆಯಲ್ಲ, ಅದು ನಿಮ್ಮ ಸಮಸ್ಯೆ. ಭಾರತದ ಘರ್ಜನೆಯನ್ನು ಸಹಿಸಲಾಗದೆ ಮೋದಿ ಅವರನ್ನು ನಿಂದಿಸಿದರೆ ಜನ ಮೆಚ್ಚುತ್ತಾರಾ ಖರ್ಗೆ ಅವರೇ, ನಾಲಿಗೆ ಹರಿಬಿಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ‌ಅಶೋಕ್ ಸಲಹೆ ನೀಡಿದ್ದಾರೆ.