ಪ್ರತಿಭಾ ಕವಿಗೋಷ್ಠಿಯಲ್ಲಿ ಜನಪದ ಕಲರವ

ಮೈಸೂರು: ದಸರಾ ಕವಿಗೋಷ್ಠಿಯಲ್ಲಿ ಇದೇ ಮೊದಲ ಬಾರಿಗೆ ವಿವಿಧ ಜನಪದಗಳ ಕಾವ್ಯವಾಚನ ಹಾಗೂ ಗಾಯನಕ್ಕೆ ವೇದಿಕೆ ಕಲ್ಪಿಸಿದ್ದು ಜನಪದ ಗೀತೆಗಳು ಜನರಿಗೆ ಮೋಡಿ ಮಾಡಿದವು.

ಪ್ರತಿಭಾ ಕವಿಗೋಷ್ಠಿಯಲ್ಲಿ ಈ ನೆಲದ ಮಣ್ಣಿನ ಮಕ್ಕಳು ಕಟ್ಟಿದ ಜಾನಪದ, ಗೀಗಿಪದ, ಲಾವಣಿ ಪದ, ಸೋಬಾನೆ ಪದ, ಅಣಕುಪದ,ಪಾಡ್ದನಗಳನ್ನು ಕೇಳಿ ಪ್ರೇಕ್ಷಕರು ಖುಷಿಪಟ್ಟರು.

ದಸರಾ ಮಹೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ನಡೆಯುತ್ತಿರುವ ಪಂಚ ಕಾವ್ಯದೌತಣ ಕವಿಗೋಷ್ಠಿಯಲ್ಲಿ ಶುಕ್ರವಾರ ಜರುಗಿದ ಪ್ರತಿಭಾ ಕವಿಗೋಷ್ಟಿಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 16 ಜನಪದ ಕಾವ್ಯವಾಚಕರು ಹಾಗೂ ಗಾಯಕರು ಕಂಸಾಳೆ, ತಂಬೂರಿ, ತಾಳ, ಮದ್ದಳೆಗಳ ಸಂಗೀತದೊಂದಿಗೆ ಸರಸ-ಸಲ್ಲಾಪ, ಬಸುರಿ ಬಯಕೆ, ಜರಿವ ಪದ, ಒಗಟು ಪದ, ತುಳುನಾಡಿನ ದೈವ ಪದ, ಮಲೆ ಮಾದಪ್ಪ, ಬಿಳಿಗಿರಿರಂಗಪ್ಪನ ಮೇಲಿನ ಪದಗಳ ಜನಪದದ ವಿವಿಧ ಪ್ರಕಾರಗಳ ಗಾಯನಗಳಿಗೆ ಮನದಾಳದಿಂದ‌ ಸಂತಸಪಟ್ಟರು.

ನಂಜನಗೂಡಿನ ಲೇಖಕಿ ಡಾ.ಎನ್. ಕೆಂಪಮ್ಮ ಸರಸ-ಸಲ್ಲಾಪ ಕುರಿತ ಸೆರಗ ಬಿಡು ರಂಗಯಗ್ಯಾ.. ರಂಗ …, ಕೃಷ್ಣೇಗೌಡ ಕಿಲಾರ ಅವರ “ಬಸುರಿ ಬಯಕೆ’ ಕುರಿತ ಜಾನಪದ, ಕುಮಾರ ರವರ ‘ಎಂತಾ ಕುದುರೆಯ ನಾ.. ಕೊಂಡುಕೊಂಡೆ…, ಜಯಂತಿರವರು ತುಳುನಾಡಿನ ದೈವಗಳ ಹುಟ್ಟಿನ ಸಂದಿ ಪಾಡ್ದನ ‘ಡೆನ್ನಾನೋ… ಡೆನ್ನಾನೊ…’, ಡಾ.ಜೀವನಸಾಬ ವಾಲೀಕರ ರವರು ಹಾಡಿದ ಬಸವಣ್ಣನವರ ಕುರಿತು ತಾಯಿಯೊಬ್ಬಳು ಕಟ್ಟಿ ಹಾಡಿದ ಲಾವಣಿ ಪದಗಳು ರಂಜಿಸಿತು.

ಕಿರುತೆರೆಯ ಸರಿಗಮಪ ಸಂಗೀತ ಕಾರ್ಯಕ್ರಮದ ಜೂರಿಯಾಗಿರುವ ಹಾಗೂ ನಾಟಕ ನಿರ್ದೇಶಕರಾದ ದೇವಾನಂದ ವರಪ್ರಸಾದ ಅವರು ಕನ್ನಡದ ಪ್ರಸಿದ್ದ ಗಾದೆಗಳನ್ನು ಪದವಾಗಿಸಿದ ಗೀತೆ, ನರಸಿಂಹಮೂರ್ತಿ ರವರು ಮಲೆಮಹದೇಶ್ವರ ಕುರಿತ ‘ ಮಾದಪ್ಪನ ಬೆಟ್ಡಕ್ಕೆ ಹೊಗೋಣ ಬನ್ನಿ… ಮಾದಪ್ಪನ ಸೇವೆ ಮಾಡೋಣ ಬನ್ನಿ ..’ ಗಾಯನಕ್ಕೆ ಪ್ರೇಕ್ಷಕರ ಕಡೆಯಿಂದ ಉಘೇ ಮಾದಪ್ಪ.. ಎಂಬ ಘೋಷವಾಕ್ಯಕ್ಕೆ ಚಪ್ಪಾಳೆಗಳ ಸುರಿಮಳೆಯಾಯಿತು.

ಕಹಳೆ ಊದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ಜನಪದ ತಜ್ಞರು ಹಾಗೂ ಪ್ರಸಾರಂಗ ನಿರ್ದೇಶಕರಾಗಿರುವ ಪ್ರೊ.ನಂಜಯ್ಯ ಹೊಂಗನೂರು ರವರು, ಜ್ಞಾನ, ವಿಜ್ಞಾನ, ತಂತ್ರಜ್ಞಾನದ ಮೂಲ ಜನಪದವೇ ಆಗಿದೆ. ಜನಪದಗಳು ಸರಳ, ಸ್ಪಷ್ಟ ಹಾಗೂ ನೇರವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿರುವ ಪ್ರೊ.ಡಿ.ಕೆ.ರಾಜೇಂದ್ರ, ಮುಖ್ಯ ಅತಿಥಿಗಳಾದ ಪ್ರೊ. ಶೈಲಜಾ ಹಿರೇಮಠ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಕವಿಗೋಷ್ಟಿಯ ಉಪಸಮಿತಿಯ ಕಾರ್ಯದರ್ಶಿ ಪ್ರೊ. ಎನ್.ಕೆ.ಲೋಲಾಕ್ಷಿ, ಕಾರ್ಯದರ್ಶಿ ಚೇತನ್ ಕುಮಾರ್, ಅಧಿಕಾರೇತರ ಸಮಿತಿಯ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಮನೋನ್ಮಣಿ ಮತ್ತಿತರರು ಹಾಜರಿದ್ದರು.