ಮೈಸೂರು: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚು ಜನರು ಪ್ರಯಾಣಿಸುವುದರಿಂದ ಅವರಿಗೆ ಸೌಲಭ್ಯ ಕಲ್ಪಿಸಲು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮುಂದಾಗಿದ್ದಾರೆ.
ಪೊಂಗಲ್ ಹಬ್ಬದ ಸಂದರ್ಭದಲ್ಲಿ ತಮಿಳುನಾಡಿಗೆ ಪ್ರಯಾಣಿಸುವ ಪ್ರಯಾಣಿಕರಿಗಾಗಿ ವಿಶೇಷ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಯದುವೀರ್ ಒಡೆಯರ್ ಮಾಹಿತಿ ನೀಡಿದ್ದಾರೆ.
ನೈರುತ್ಯ ರೈಲ್ವೆ ವತಿಯಿಂದ ಮೈಸೂರು ಮತ್ತು ಟ್ಯುಟಿಕಾರನ್ ನಡುವೆ ಎರಡು ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ರೈಲುಗಳ ವಿವರ 06283 ಮೈಸೂರು– ಟ್ಯುಟಿಕಾರನ್ ಎಕ್ಸ್ಪ್ರೆಸ್ ವಿಶೇಷ ರೈಲುಗಳು ಇದೇ 9 ಮತ್ತು 13 ರಂದು (ಶುಕ್ರವಾರ ಮತ್ತು ಮಂಗಳವಾರ) ಮೈಸೂರಿನಿಂದ ಸಂಜೆ 18:35 ಗಂಟೆಗೆ ಹೊರಡಲಿದ್ದು, ಮರುದಿನ ಬೆಳಗ್ಗೆ 11.00 ಗಂಟೆಗೆ ಟ್ಯುಟಿಕಾರನ್ ತಲುಪಲಿದೆ ಎಂದು ಸಂಸದರು ವಿವರಿಸಿದ್ದಾರೆ.
06284 ಟ್ಯುಟಿಕಾರನ್ –ಮೈಸೂರು ಎಕ್ಸ್ಪ್ರೆಸ್ ವಿಶೇಷ ರೈಲು 10 ಮತ್ತು 14ರಂದು (ಶನಿವಾರ ಮತ್ತು ಬುಧವಾರ) ಟ್ಯುಟಿಕಾರನ್ನಿಂದ ಮಧ್ಯಾಹ್ನ 2 ಗಂಟೆಗೆ ಹೊರಡಲಿದ್ದು, ಮರುದಿನ ಬೆಳಗ್ಗೆ 7.45 ಗಂಟೆಗೆ ಮೈಸೂರು ತಲುಪಲಿದೆ ಎಂದು ಹೇಳಿದ್ದಾರೆ.
ಈ ರೈಲುಗಳು ಮಂಡ್ಯ, ಮದ್ದೂರು, ಚನ್ನಪಟ್ಟಣ, ರಾಮನಗರಂ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಹೊಸೂರು, ಧರ್ಮಪುರಿ, ಸೇಲಂ ಜಂಕ್ಷನ್, ನಾಮಕ್ಕಲ್, ಕರೂರು ಜಂಕ್ಷನ್, ದಿಂಡಿಗಲ್ ಜಂಕ್ಷನ್, ಮದುರೈ ಜಂಕ್ಷನ್, ವಿರುದ್ಧ್ನಗರ ಜಂಕ್ಷನ್, ಸತೂರು, ಕೋವಿಲ್ಪಟ್ಟಿ ಮತ್ತು ಟುಟಿಮೇಲೂರ್ ನಿಲ್ದಾಣಗಳಲ್ಲಿ ನಿಲುಗಡೆ ಕೊಡಲಾಗುತ್ತದೆ.
ಈ ವಿಶೇಷ ರೈಲು ಒಟ್ಟು 19 ಕೋಚ್ಗಳನ್ನು ಹೊಂದಿದ್ದು, ಎಸಿ ಟು ಟೈಯರ್ – 03, ಎಸಿ ತ್ರಿ ಟೈಯರ್ – 06, ಸ್ಲೀಪರ್ ಕ್ಲಾಸ್ – 08, ಎಸ್ಎಲ್ಆರ್/ಡಿ – 02 ಬೋಗಿಗಳು ಇವೆ ಎಂದು ತಿಳಿಸಲಾಗಿದೆ.

