ಮೈಸೂರು: ಸುಗ್ಗನಹಳ್ಳಿ ಗ್ರಾಮದ ಹಾಸನ- ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ವಿಜೇತ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಿದ್ಯಾರ್ಥಿಗಳು ಸಂಕ್ರಾಂತಿ ಹಬ್ಬವನ್ನು ಸಂಸ್ಕೃತಿ ಮತ್ತು ಸಂಪ್ರದಾಯಬದ್ದವಾಗಿ ಆಚರಿಸಿ ಇತರೆ ಶಾಲೆಗಳಿಗೆ ಮಾದರಿಯಾಗಿದ್ದಾರೆ
ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಯರು ಸೀರೆಯುಟ್ಟಿದ್ದರೆ, ಹುಡುಗರು ಪಂಚೆಯುಟ್ಟು
ರಾಶಿ ಹಾಕಿದ್ದ ರಾಗಿ, ಭತ್ತಕ್ಜೆ ಪೂಜೆ ಸಲ್ಲಿಸಿದರು. ಕೆಲವರು ಭತ್ತ ಕುಟ್ಟಿದರೆ ಮತ್ತೆ ಕೆಲವರು ರಾಗಿ ಬೀಸಿ ಮುದ್ದೆಗೆ ಹಿಟ್ಟು ಸಿದ್ಧಪಡಿಸುವಲ್ಲಿ ತಲ್ಲೀನರಾಗಿದ್ದರು. ಮೊಸರು ಕಡೆದು ಬೆಣ್ಣೆ ತೆಗೆಯುತ್ತಿದ್ದರು.
ಈ ಶಾಲೆಯಲ್ಲಿ ಅಪ್ಪಟ ಹಳ್ಳಿ ಪರಿಸರದಲ್ಲಿ ಸಂಕ್ರಾಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಗೋಪೂಜೆಗೆ ನಾಟಿ ಹಸುಗಳು ಸಾಕ್ಷಿಯಾದವು. ಸಂಕ್ರಾಂತಿಯ ಅಂಗವಾಗಿ ಶಾಲೆ ಯನ್ನು ವಿಶೇಷವಾಗಿ ಅಲಂಕರಿಸ ಲಾಗಿತ್ತು. ರಂಗೋಲಿ ಬಿಡಿಸಿ, ಬಾಳೆಕಂದು, ಮಾವಿನ ತೋರಣ, ಕಬ್ಬಿನ ಜಲ್ಲೆ, ತೆಂಗಿನ ಗರಿಗಳನ್ನು ಕಟ್ಟಿ ಹಬ್ಬವನ್ನು ಕಳೆಗಟ್ಟುವಂತೆ ಮಾಡಿದ್ದವು.
ಗೋ ಪೂಜೆ, ಸುಗ್ಗಿ ಹಬ್ಬಗಳು ಸಡಗರವನ್ನು ಹೆಚ್ಚಿಸಿದವು.
ಸಾಂಪ್ರದಾಯಿಕ ಉಡುಪು ತೊಟ್ಟು ಬಂದಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಆಡಳಿತ ಮಂಡಳಿಯವರು ಸಡಗರದಿಂದ ಪಾಲ್ಗೊಂಡಿದ್ದರು.
ಶಾಲೆಯ ಪ್ರವೇಶ ದ್ವಾರದ ಬಳಿ ಗೋ ಪೂಜೆ ನೆರವೇರಿಸುವ ಮೂಲಕ ಸಂಕ್ರಾಂತಿಯ ಸುಗ್ಗಿ ಸಂಭ್ರಮಕ್ಕೆ ಚಾಲನೆ ನೀಡಲಾಯಿತು. ಮೆಕ್ಕೆಜೋಳ, ಭತ್ತ, ಕಡಲೆಕಾಳು, ಹೆಸರು ಕಾಳು, ಗೋಽ, ಬೆಲ್ಲ, ಅಡಿಕೆ, ಸಬ್ಬಕ್ಕಿ, ಸಿರಿಧಾನ್ಯ, ಕೆಂಪಕ್ಕಿ ಸೇರಿ ಹಲವು ಧಾನ್ಯಗಳ ರಾಶಿಗೆ ನಮಿಸಲಾಯಿತು.
ಹಸುಗಳಿಗೆ ಅಕ್ಕಿ, ಬೆಲ್ಲ ಮತ್ತು ಬಾಳೆಹಣ್ಣು ತಿನ್ನಿಸಲಾಯಿತು. ಪೂಜೆಯ ನಂತರ ಎಲ್ಲರಿಗೂ ಎಳ್ಳು, ಬೆಲ್ಲ, ಕಬ್ಬು ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು.
ಶಾಲಾ ಮಕ್ಕಳನ್ನು ಸಿಂಗಾರಗೊಳಿಸಿದ ಎತ್ತಿನಗಾಡಿಯಲ್ಲಿ ಕೂರಿಸಿಕೊಂಡು ಶಾಲೆಯ ಸಂಸ್ಥಾಪಕ ಹೆಚ್. ಎಸ್. ಮಹೇಶ್ ಮೆರವಣಿಗೆ ಮಾಡಿ, ಗ್ರಾಮೀಣ ಪ್ರದೇಶದಲ್ಲಿ ಆಚರಿಸುವ ಸಂಕ್ರಾಂತಿ ಹಬ್ಬದ ಬಗ್ಗೆ ಮಕ್ಕಳಿಗೆ ಮನದಟ್ಟು ಮಾಡಿದರು.
ಹೊಸ ಅಗ್ರಹಾರ ಗ್ರಾ. ಪಂ. ಅಧ್ಯಕ್ಷ ಮಲ್ಲಿಕಾರ್ಜುನ, ವಿಜೇತ ಇಂಟರ್ ನ್ಯಾಷನಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷೆ ಬೇಬಿ ಮಹೇಶ್, ಕಾರ್ಯದರ್ಶಿ ಹೆಚ್. ಎಸ್. ಶ್ವೇತ, ಸಹಕಾರ ಸಂಘದ ನಿರ್ದೇಶಕ ರಾಮೇಗೌಡ, ಉದ್ಯಮಿ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.

