ಡ್ರಗ್ಸ್ ಪತ್ತೆ ವಿಚಾರದಲ್ಲಿ ಕರ್ನಾಟಕ ಪೊಲೀಸರು ವಿಫಲ:ಯದುವೀರ್

ಮೈಸೂರು,ಫೆ.1: ಮೈಸೂರಿನಲ್ಲಿ ಮತ್ತೆ 10 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ವಿಚಾರ ಸಂಬಂಧ ಕರ್ನಾಟಕ ಪೊಲೀಸರು ವಿಫಲ ಆಗಿದ್ದಾರೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸಂಸದರು,ಹೆಬ್ಬಾಳದಲ್ಲಿ ಎನ್ ಸಿ ಬಿ ರೇಡ್ ಮಾಡಿದ್ದಾರೆ,ಗೃಹ ಸಚಿವರು, ಪೊಲೀಸ್ ಕಮಿಷನರ್ ಇಬ್ಬರು ಏನು ಸಿಕ್ಕಿಲ್ಲ ಅಂತ ಹೇಳಿದರು. ಆದರೆ ಎನ್ ಸಿ ಬಿ 10ಕೋಟಿ ಮೌಲ್ಯದ ಡ್ರಗ್ಸ್ ಹಾಗೂ ಮಾದಕ ದ್ರವ್ಯಗಳು ಪತ್ತೆಯಾಗಿರುವ ಬಗ್ಗೆ ಪ್ರಕಟಣೆ ಹೊರಡಿಸಿದೆ. ಎನ್ ಸಿಬಿ ಅವರಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ಡ್ರಗ್ಸ್ ಸಿಂಡಿಕೇಟ್ ಉತ್ಪಾದನೆ ಮಾಡುವ ಜಾಗವನ್ನೇ ಎನ್ ಸಿಬಿ ರೇಡ್ ಮಾಡಿದೆ,ಡೆಲ್ಲಿ ಪೊಲೀಸರು,ಮಹಾರಾಷ್ಟ್ರ ಪೊಲೀಸರು ಬಂದು ಮೈಸೂರಿನಲ್ಲಿ ಡ್ರಗ್ಸ್ ಪತ್ತೆ ಮಾಡುತ್ತಿದ್ದಾರೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂಬುದಕ್ಕೆ ಉದಾಹರಣೆ.ನಮ್ಮ ಪೊಲೀಸರು ಏನು ಮಾಡುತ್ತಿದ್ದಾರೆ ಅನ್ನೋ ಅನುಮಾನ ಮೂಡಿದೆ ಎಂದು ಸಂಸದರು ಸಂಶಯ ವ್ಯಕ್ತಪಡಿಸಿದರು.

ರಾಸಾಯನಿಕ ವಸ್ತುಗಳು ಸಿಕ್ಕಿದೆ. ನಿಜಕ್ಕೂ ಪೊಲೀಸರು ಸತ್ಯ ಮುಚ್ಚಿಡಲು ಪ್ರಯತ್ನ ಮಾಡಿದರಾ ಎನ್ನುವ ಅನುಮಾನ ಮೂಡೋದು ಸಹಜ. ಆದರೆ ನಿಜಕ್ಕೂ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ಕುಸಿದಿದೆ. ಅಧಿಕಾರಿಗಳು ಸೂಕ್ತವಾಗಿ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಯದುವೀರ್ ಬೇಸರ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಅವರು ಸವಾಲ್ ಆಗಿ ಈ ಪ್ರಕರಣವನ್ನು ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರ ಒಂದು ಸ್ಪೆಷಲ್ ಟೀಮ್ ಮಾಡಬೇಕು. ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕು‌‌‌ ಎಂದು ಯದುವೀರ್‌ ಒತ್ತಾಯಿಸಿದರು.

ಮೈಸೂರಿನಲ್ಲಿ ಅನೇಕ ಪ್ರಕರಣಗಳು ನಡೆಯುತ್ತಿದೆ. ಮೈಸೂರಿನ ರೇಪ್ ಅಂಡ್ ಮರ್ಡರ್, ಹುಬ್ಬಳ್ಳಿ , ಬಳ್ಳಾರಿ ಪ್ರಕರಣ ಎಲ್ಲಾ ಕಡೆ ಪೊಲೀಸರು ವಿಫಲ ಆಗಿದ್ದಾರೆ. ಗೃಹ ಇಲಾಖೆ ವಿಫಲ ಆಗಿದೆ. ಮೈಸೂರಿನ ಹೆಸರು ರಾಷ್ಟ್ರ ಮಟ್ಟದಲ್ಲಿ ಹಾಳಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಇನ್ನಾದರೂ ಡ್ರಗ್ಸ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದರು.

ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ದಾಖಲೆ ಬರೆದಿದ್ದಾರೆ. ಅವರ ದಾಖಲೆಗೆ ಡ್ರಗ್ಸ್ ಪ್ರಕರಣಗಳು, ರೇಪ್ ಅಂಡ್ ಮರ್ಡರ್ ಪ್ರಕರಣಗಳು ಕೂಡ ಸೇರಬೇಕು, ನಾನು ಮತ್ತೊಮ್ಮೆ ಡ್ರಗ್ಸ್ ಬಗ್ಗೆ ಕೇಂದ್ರ ಗೃಹ ಸಚಿವರ ಜೊತೆ ಮಾತನಾಡುತ್ತೇನೆ ಎಂದು ಯದುವೀರ್ ಹೇಳಿದರು.