ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಭರ್ಜರಿ ಪ್ಲಾನ್ ಮಾಡಿದ ಎಂಡಿಎ

ಮೈಸೂರು: ಅವ್ಯವಹಾರಗಳಿಂದಾಗಿ ವ್ಯಾಪಕ ಟೀಕೆಗೆ ಗುರಿ ಯಾಗಿದ್ದ ಹಿಂದಿನ ಮುಡಾ, ಎಂಡಿಎ ಆಗಿ ಪರಿವರ್ತನೆಯಾದ ಬಳಿಕ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಭರ್ಜರಿ ಪ್ಲಾನ್ ಮಾಡಿದೆ.

ವಿವಿಧ ಮೂಲಗಳಿಂದ ಒಂದು ಸಾವಿರ ಕೋಟಿ ರೂ. ಆದಾಯ ಗಳಿಸುವ ಯೋಜನೆ ರೂಪಿಸಿದೆ.

ಎಂಡಿಎ ಅಧಿಕಾರಿಗಳು ರೂಪಿಸಿರುವ ಪ್ಲಾನ್ ಸಫಲವಾದರೆ ಮುಂದಿನ ದಿನಗಳಲ್ಲಿ ಹತ್ತಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅಡ್ಡಿಯಾಗಿರುವ ಹಣದ ಸಮಸ್ಯೆಯನ್ನು ನಿವಾರಿಸಲು ಸುಲಭವಾಗಲಿದೆ.

ಆಯಕಟ್ಟಿನ ಜಾಗದಲ್ಲಿರುವ ನಿವೇಶನಗಳನ್ನು ಆನ್ ಲೈನ್ ಮೂಲಕ ಹರಾಜು ನಡೆಸಲು ಅಧಿಸೂಚನೆ ಹೊರಡಿಸಿದೆ.

ಭವಿಷ್ಯದಲ್ಲಿ ಬಹುಮಹಡಿ ವಸತಿ ಸಮುಚ್ಚಯ ಸಂಕೀರ್ಣ, ಪೆರಿಫೆರಲ್ ರಿಂಗ್ ರಸ್ತೆ, ಹೊಸ ಬಡಾವಣೆ ಗಳ ರಚನೆ ಸೇರಿದಂತೆ ಮಹತ್ವದ ಯೋಜನೆಗಳನ್ನು ಕೈಗೊಳ್ಳಲು ಪ್ರಾರಂಭಿಕ ಹಣದ ಅಗತ್ಯವಿರುವ ಕಾರಣ ತನ್ನಲ್ಲಿರುವ ನಿವೇಶನಗಳನ್ನು ಬಳಸಿಕೊಂಡು ಆದಾಯ ಕಂಡುಕೊಳ್ಳಲು ಎಂಡಿಎ ಕೈ ಹಾಕಿದೆ.

ಈ ಹಿಂದೆ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ(ಮುಡಾ) ಅಭಿವೃದ್ಧಿಪಡಿಸಿ, ಇದೀಗ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಬಡಾವಣೆಗಳೂ ಸೇರಿದಂತೆ ಸುಮಾರು ೭೦೦ ಬಡಾವ ಣೆಗಳನ್ನು ಈಗಾಗಲೇ ಮೈಸೂರು ಮಹಾನಗರಪಾಲಿಕೆ, ಹೂಟಗಳ್ಳಿ ನಗರಸಭೆ, ಶ್ರೀರಾಂಪುರ, ಬೋಗಾದಿ, ಕಡಕೊಳ, ರಮ್ಮನಹಳ್ಳಿ ಪಂಚಾಯಿತಿಯೂ ಸೇರಿದಂತೆ ವಿವಿಧ ಗ್ರಾಪಂಗಳಿಗೆ ಹಸ್ತಾಂತರಿಸಲಾಗಿದೆ.

ಇದರ ಪರಿಣಾಮ ಆಸ್ತಿ ತೆರಿಗೆ, ನಕ್ಷೆ ಅನುಮೋದನೆ ಶುಲ್ಕ, ಖಾತಾ ನೋಂದಣಿ ಮತ್ತು ವರ್ಗಾವಣೆ ಶುಲ್ಕ, ದಾಖಲೆಗಳ ಪ್ರಮಾಣಿತ ನಕಲು, ಭೂಸ್ವಾಧಿನ ಪ್ರಮಾಣಪತ್ರ, ಎನ್‌ಒಸಿ ಸೇರಿದಂತೆ ಪ್ರಮುಖ ದಾಖಲೆಗಳ ವಿತರಣೆಯ ಶುಲ್ಕದಿಂದ ಬರುತ್ತಿದ್ದ ಆದಾಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಇದಲ್ಲದೆ, ಖಾತೆ ಮಾಡುವುದನ್ನು ಎಂಡಿಎದಿಂದ ಸ್ಥಳೀಯ ಸಂಸ್ಥೆಗಳಿಗೆ ವಹಿಸಿದ್ದರಿಂದ ಮತ್ತಷ್ಟು ಆದಾಯ ಕಡಿಮೆಯಾಗಿದೆ.

ಇದರಿಂದ ಅಧಿಕಾರಿಗಳು, ಸಿಬ್ಬಂದಿ ಮತ್ತು ಹೊರ ಗುತ್ತಿಗೆ ಸಿಬ್ಬಂದಿ ವೇತನ, ನಿವೃತ್ತಿ ವೇತನ, ವಾಹನಗಳ ನಿರ್ವಹಣೆ ಮತ್ತು ಕಚೇರಿ ವ್ಯವಹಾರಗಳಂತಹ ಖರ್ಚು-ವೆಚ್ಚಗಳನ್ನು ನಿರ್ವಹಿಸುವುದು ಈಗ ಪ್ರಾಧಿಕಾರಕ್ಕೆ ಕಷ್ಟಕರವಾಗಿದೆ.

ಇದನ್ನು ಮನಗಂಡಿರುವ ಎಂಡಿಎ ಆಯುಕ್ತ ಕೆ.ಆರ್. ರಕ್ಷಿತ್ ಅವರು ಆರ್ಥಿಕ ಮೂಲ ಸದೃಢಗೊಳಿಸಲು ಮಾರ್ಗೋಪಾಯಗಳನ್ನು ರೂಪಿಸುತ್ತಿದ್ದಾರೆ.

ಆರ್ಥಿಕ ಕೊರತೆಯನ್ನು ನೀಗಿಸಲು ಸದ್ದಿಲ್ಲದೆ ಸಂಪನ್ಮೂಲ ಕ್ರೋಢೀಕರಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯ ಬಡಾವಣೆ ಎನಿಸಿರುವ ವಿಜಯನಗರ(ಮೊದಲನೇ ಹಂತದಿಂದ ನಾಲ್ಕನೇ ಹಂತ), ವಿಜಯಶ್ರೀಪುರ, ದಟ್ಟಗಳ್ಳಿ, ಶ್ರೀರಾಂಪುರ, ಜೆ.ಪಿ.ನಗರ, ದೇವನೂರು, ರಾಜೀವ್ ನಗರ, ಲಲಿತಾದ್ರಿನಗರ ಮತ್ತು ಹೆಬ್ಬಾಳು ಪ್ರದೇಶಗಳಲ್ಲಿ ಸುಮಾರು ೧೫೦ ಎಕರೆ ಖಾಲಿ ಜಾಗವನ್ನು ಗುರುತಿಸಿದ್ದಾರೆ.

ಇಲ್ಲಿ ೨೦-೩೦, ೩೦-೪೦, ೪೦-೬೦ ಹಾಗೂ ೫೦-೮೦ ಅಡಿ ಅಳತೆಯ ನಿವೇಶನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ.

ಹಳೇ ಬಡಾವಣೆಗಳಲ್ಲಿ ಅಭಿವೃದ್ಧಿಪಡಿಸ ಲಾಗುವ ನಿವೇಶನಗಳನ್ನು ಸಾರ್ವಜನಿಕ ಹರಾಜು ಮೂಲಕ ವಿಲೇವಾರಿ ಮಾಡಲು ನಗರಾಭಿವೃದ್ಧಿ ಇಲಾಖೆಯ ಮೂಲಕ ಮುಖ್ಯಮಂತ್ರಿ ಅವರ ಅನು ಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ಈ ಹರಾಜು ಪ್ರಕ್ರಿಯೆಯಿಂದ ರೂ.೧,೦೦೦ ಕೋಟಿಗೂ ಅಧಿಕ ಆದಾಯ ನಿರೀಕ್ಷಿಸಲಾಗಿದೆ.