ಗುಲಾಬಿ‌ ಬಣ್ಣದಲ್ಲಿ ಕಂಗೊಳಿಸಿದೆ! ಮೈಸೂರು ಅರಮನೆ

ಮೈಸೂರು: ಇಂದು ಮೈಸೂರಿನ ಹೆಮ್ಮೆಯ ಐತಿಹಾಸಿಕ ಅರಮನೆ ಗುಲಾಬಿ ಬಣ್ಣದಲ್ಲಿ ಕಂಗೊಳಿಸುತ್ತಿದ್ದು‌ ನಗರದ ಜನತೆ ಹಾಗೂ ಪ್ರವಾಸಿಗರು ಇದೇನಿದು ಎಂದು ಖುಷಿಯಿಂದ ವೀಕ್ಷಿಸಿ ಸಂತಸ ಪಟ್ಟರು

ಹೌದು ಇದು ನಿಜ ಅರಮನೆ ಪಿಂಕ್ ಆಗಿ ಕಂಗೊಳಿಸುತ್ತಿದೆ.ಇದಕ್ಕೆ ಕಾರಣ ಗೃಹಲಕ್ಷ್ಮಿ ಯೋಜನೆ!

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮಿಗೆ ಮೂರು ವರ್ಷಗಳ ಸಂಭ್ರಮ.

ಈ ಸಂಭ್ರಮದ ಸವಿನೆನಪಿಗಾಗಿ ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ, ಚಿತ್ರದುರ್ಗದ ಕಲ್ಲಿನಕೋಟೆ, ಹಂಪಿಯ ಕಲ್ಲಿನರಥ, ಮಂಗಳೂರಿನಲ್ಲಿರುವ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಬೆಳಗಾವಿ ಕಿತ್ತೂರು ಚೆನ್ನಮ್ಮ ವೃತ್ತಗಳು ಭಾನುವಾರ ಸಂಜೆ 6ರಿಂದ ರಾತ್ರಿ 10ರವರೆಗೆ ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸುತ್ತಿವೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ 2,000 ರೂ ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿಜೀವನ ರೂಪಿಸಿಕೊಳ್ಳಲು ನೆರವಾಗಿರುವ ಗೃಹಲಕ್ಷ್ಮೀ ಯೋಜನೆ ಜಾರಿಗೆ ಬಂದು ಇದೇ ಆ.30ಕ್ಕೆ ಮೂರು ವರ್ಷಗಳನ್ನು ಪೂರೈಸಿದೆ.
 
ಸರ್ಕಾರವು ಗೃಹಲಕ್ಷ್ಮೀ ಯೋಜನೆ ಮೂರು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಮಹಿಳೆಯರ ಹೆಮ್ಮೆಯ ಸಂಕೇತವೆಂದು ಗುರುತಿಸಿರುವ ಗುಲಾಬಿ ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಇದುವರೆಗೂ ಈ ಯೋಜನೆಯಡಿ 1.20ಕೋಟಿ ಫಲನುಭವಿಗಳ ಖಾತೆಗೆ 76500ಕೋಟಿಗೂ ಹೆಚ್ಚು ಹಣ ಪಾವತಿಸಲಾಗಿದೆ.