ಜೀವಸಾರ್ಥಕತೆಯನ್ನು ಕರ್ನಾಟಕದ ಸೊಟ್ಟೊ ಆಗಿ ಗುರುತಿಸಲು ತೀರ್ಮಾನ -ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು: ಅಂಗಾಂಗ ದಾನವನ್ನು ಉತ್ತೇಜಿಸಲು ಜೀವಸಾರ್ಥಕತೆ ಕಾರ್ಯಕ್ರಮವನ್ನು ಕರ್ನಾಟಕದ ಸೊಟ್ಟೊ (SOTTO-STATE ORGAN TISSUE TRANSPLANT ORGANISATION) ಎಂದು ಗುರುತಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅಂಗಾಂಗ ಕಸಿ ಕಾರ್ಯಕ್ರಮದ ಪ್ರಚಾರಕ್ಕೆ ಸಂಬಂಧಿಸಿದಂತೆ ಜೀವಸಾರ್ಥಕತೆಯ ಪ್ರಮುಖರೊಂದಿಗೆ ಸಭೆ ನಡೆಯಿತು. ಕೋವಿಡ್ ಪ್ರಕರಣಗಳ ಇಳಿಕೆಯೊಂದಿಗೆ ದಾನಿಗಳ ಸಂಖ್ಯೆ ಹೆಚ್ಚುತ್ತಿದೆ. 2019ರಲ್ಲಿ 105 ಅಂಗಾಂಗ ದಾನಿಗಳಿದ್ದರು. 2020ರಲ್ಲಿ ಪೂರ್ವ ಕೋವಿಡ್ ಸಮಯದಲ್ಲಿ ಅಂದರೆ ಜನವರಿಯಿಂದ ಮಾರ್ಚ್‍ವರೆಗೆ 25 ಹಾಗೂ ಕಳೆದ ಎರಡು ತಿಂಗಳಲ್ಲಿ 9 ಅಂಗಾಂಗ ಕಸಿ ನಡೆದಿದೆ.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯವು ಜೀವಸಾರ್ಥಕತೆಯ ಬಗ್ಗೆ ವರದಿ ನೀಡಿ, ಕರ್ನಾಟಕದ ಸೊಟ್ಟೊ ಎಂದು ಗುರುತಿಸಬೇಕೆಂದು ಶಿಫಾರಸು ಮಾಡಿದ್ದು, ಇದನ್ನು ಜಾರಿ ಮಾಡಲು ನಿರ್ಧರಿಸಲಾಯಿತು.
ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜುಗಳಿಗೆ ಅಂಗಾಂಗ ಮರುಪಡೆಯುವಿಕೆಗೆ ಪರವಾನಗಿ ನೀಡಲಾಗುವುದು. ಇದಕ್ಕೆ ಮಾರ್ಗದರ್ಶನ ನೀಡಲು ಉನ್ನತ ಮಟ್ಟದ ಸಲಹಾ ಸಮಿತಿ ರಚಿಸಲಾಗುತ್ತದೆ ಹಾಗೂ ಹೊಸದಾಗಿ ಉಪನಿರ್ದೇಶಕರು, ಕಚೇರಿ ಪೆÇೀಷಕ ಸಿಬ್ಬಂದಿ ಮತ್ತು 20 ಅಂಗಾಂಗ ಕಸಿ ಸಂಯೋಜಕರನ್ನು ನೇಮಿಸಲಾಗುವುದು. ಇದಕ್ಕಾಗಿ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಕಸಿ ಕುರಿತು ಜಾಗೃತಿಗೆ ರಾಜ್ಯಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.