ಹಾವೇರಿ: ಕೋವಿಡ್ ರೂಪಾಂತರ ತಳಿಯನ್ನಲಾದ ಡೆಲ್ಟಾ ಪ್ಲಸ್ ವೈರಸ್ ಮೇಲೆ ಸರ್ಕಾರ ತೀವ್ರ ನಿಗಾವಹಿಸಿದೆ ಎಂದು ಗೃಹ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಹಾವೇರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.
ದೇಶದಲ್ಲಿ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಮೊದಲು ಪತ್ತೆಯಾಗಿದ್ದು, ದೇಶದಲ್ಲಿಯೇ 35 ರಿಂದ 40 ಡೆಲ್ಪಾ ಪ್ರಕರಣಗಳು ಮಾತ್ರ ಪತ್ತೆಯಾಗಿವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಡೆಲ್ಪಾ ಮತ್ತು ಡೆಲ್ಪಾ ಪ್ಲಸ್ ಪ್ರಕರಣಗಳು ಕುರಿತಂತೆ ತೀವ್ರ ನಿಗಾ ವಹಿಸಲಾಗಿದೆ. ನಮ್ಮಲ್ಲಿ ಜಿನೋನ್ ಸೆಂಟರ್ಗಳಿದ್ದು, ಡೆಲ್ಟಾ ಪ್ಲಸ್ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಗುತ್ತಿದೆ. ಈ ವೈರಸ್ನ ಬೇರೆ ಬೇರೆ ಪ್ರಕಾರಗಳು ಪರಿಣಾಮ ಹಾಗೂ ಈಗಿನ ವ್ಯಾಕ್ಸಿನ್ ಬಳಕೆಗಳ ಕುರಿತಂತೆ ಅಧ್ಯಯನ ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ನಿಯಮಾವಳಿಗಳನ್ನು ಪಾಲಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಇಳಿಮುಖವಾದರೂ ಮರಣ ಪ್ರಮಾಣ ಜಾಸ್ತಿ ಇದೆ. ಜಿಲ್ಲೆಯ ಮರಣ ಪ್ರಕರಣಗಳ ಆಡಿಟ್ ಮಾಡಲು ರಾಜ್ಯದ ವೈದ್ಯಕೀಯ ತಜ್ಞರ ತಂಡ ಜಿಲ್ಲೆಗೆ ಬಂದಿದೆ. ಈ ತಂಡ ನೀಡುವ ಆಡಿಟ್ ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮೂರನೇ ಅಲೆ ಆರಂಭವಾಗುವ ಮುನ್ನ ಜಿಲ್ಲೆಯಲ್ಲಿ ಗರಿಷ್ಠ ಎಚ್ಚರಿಕೆಗಳೊಂದಿಗೆ ಸಿದ್ಧತೆಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಮಕ್ಕಳ ಮೇಲೆ ಮೂರನೇ ಪ್ರಭಾವ ಬೀರುವ ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಜೂನ್ 25 ರಿಂದ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲು ಸೂಚನೆ ನೀಡಲಾಗಿದೆ. ಜುಲೈ 30ರೊಳಗೆ ಮಕ್ಕಳ ಆರೋಗ್ಯ ತಪಾಸಣೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಮೂರನೇ ಅಲೆ ಎದುರಿಸಲು ವ್ಯಾಕ್ಸಿನ್ ಪ್ರಮಾಣವನ್ನು ಹೆಚ್ಚಳಮಾಡುವುದು ಅಗತ್ಯವಿದೆ ಎಂದು ಹೇಳಿದರು.
ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ ಉಪಸ್ಥಿತರಿದ್ದರು.

