ಹೊಸಪೇಟೆ (ವಿಜಯನಗರ): ಹಂಪಿಯ ಸಮಗ್ರ ಅಭಿವೃದ್ಧಿಗೆ 500 ಕೋಟಿ ರೂ. ವೆಚ್ಚದಲ್ಲಿ ಮಾಸ್ಟರ್ ಪ್ಲ್ಯಾನ್ ತಯಾರಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ತಿಳಿಸಿದರು.
ವಿಜಯನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಸಚಿವರು ಮಾತನಾಡಿದರು.
ಹಂಪಿ ಜೂ ಬಳಿ ಸರ್ಕಾರಕ್ಕೆ ಸೇರಿದ 200 ಎಕರೆ ಜಾಗದಲ್ಲಿ ಸುಸಜ್ಜಿತ ತ್ರಿ ಸ್ಟಾರ್ ಹೋಟೆಲ್ ನಿರ್ಮಿಸಲಾಗುವುದು. ಅದಕ್ಕೆ 18ರಿಂದ 20 ಕೋಟಿ ರೂ. ವೆಚ್ಚವಾಗಲಿದೆ. ವಾರದೊಳಗೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಅವರು ಹೇಳಿದರು.
ವಾಹನ ನಿಲುಗಡೆಗೆ ಪಾರ್ಕಿಂಗ್, ಹೆಲಿಪ್ಯಾಡ್, ಥೀಮ್ ಪಾರ್ಕ್ ಹಾಗೂ ಒಂದು ಸಾವಿರ ವಿದ್ಯಾರ್ಥಿಗಳು ಉಳಿದುಕೊಳ್ಳಲು ಕಟ್ಟಡ ನಿರ್ಮಿಸಲಾಗುವುದು. ಅದಕ್ಕೆ ಬಹಳ ಕಡಿಮೆ ದರ ನಿಗದಿಪಡಿಸಲಾಗುವುದು. ಹಂಪಿಯ ಇತಿಹಾಸ ಯುವಜನಾಂಗಕ್ಕೆ ತಿಳಿಸುವುದು ಇದರ ಉದ್ದೇಶವಾಗಿದೆ ಎಂದು ಸಚಿವರು ತಿಳಿಸಿದರು.
ಹಂಪಿ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆ ಕೆಲಸ ಪ್ರಗತಿಯಲ್ಲಿದ್ದು, ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಹಂಪಿ ಮಾಸ್ಟರ್ ಪ್ಲ್ಯಾನ್ ಪರಿಷ್ಕರಣೆಗೊಂಡ ನಂತರ ಹೋಂ ಸ್ಟೇಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುವುದು. ಹೋಂ ಸ್ಟೇಗಳಿಂದ ಪರಿಸರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಪ್ರವಾಸಿಗರಿಗೂ ಉಳಿದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ತಿಳಿಸಿದರು.
ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತದಲ್ಲಿ ರೋಪ್ ವೇ, ದ್ವಿಪಥ ರಸ್ತೆ, ಸುತ್ತಲೂ ಪರಿಕ್ರಮಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಬೆಟ್ಟ ಹತ್ತಲು ತೊಂದರೆಯಾಗುತ್ತದೆ. ರೋಪ್ ವೇ ನಿರ್ಮಿಸಿದರೆ ಅವರಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಅಂಜನಾದ್ರಿ ಅಭಿವೃದ್ಧಿಪಡಿಸಲಾಗುವುದು ಎಂದು ಸಚಿವ ಯೋಗೇಶ್ವರ ಹೇಳಿದರು.
ಅಂಜನಾದ್ರಿಯೇ ಹನುಮ ಹುಟ್ಟಿದ ಸ್ಥಳ ಎನ್ನುವುದಕ್ಕೆ ಯಾವುದೇ ಅನುಮಾನವಿಲ್ಲ. ಪೌರಾಣಿಕ ಹಿನ್ನೆಲೆ ಅಥವಾ ಧಾರ್ಮಿಕದೃಷ್ಟಿಯಲ್ಲೂ ಇದೇ ಹನುಮ ಹುಟ್ಟಿದ ಸ್ಥಳ ಎನ್ನುವುದು ಜನಜನಿತ. ಅಷ್ಟೇ ಅಲ್ಲ, ರಾಮಾಯಣ ಸರ್ಕ್ಯೂಟ್ ನಲ್ಲೂ ಇದರ ಪ್ರಸ್ತಾಪವಿದೆ. ಹೀಗಿರುವಾಗ ತಿರುಪತಿ ದೇವಸ್ಥಾನ ಮಂಡಳಿಯವರು ಇದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.

