ಪಂಚವಾರ್ಷಿಕ ಯೋಜನೆಯ ರೂವಾರಿಗಳು ಜಯಚಾಮರಾಜ ಒಡೆಯರ್ –ಡಾ. ವೈ.ಡಿ. ರಾಜಣ್ಣ

ಮೈಸೂರು: ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ಮೈಸೂರು ಸಂಸ್ಥಾನದ 25ನೇ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 102ನೇ ಜಯಂತಿ ಅಂಗವಾಗಿ ಚಾಮರಾಜೇಂದ್ರ ವೃತ್ತದಲ್ಲಿರುವ ಜಯಚಾಮರಾಜೇಂದ್ರ ಒಡೆಯರ್ ರವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಗಳಾದ ಮಮತಾ (ಆರೋಗ್ಯ ಕೇಂದ್ರದ ನರ್ಸ್ ), ಪುಷ್ಪಲತಾ (ಆಶಾ ಕಾರ್ಯಕರ್ತೆ), ಸುರೇಶ್ (ಪೊಲೀಸ್ ಹೆಡ್ ಕಾನ್ ಸ್ಟೆಬಲ್ ), ಗಾಯತ್ರಿ (ಪೌರಕಾರ್ಮಿಕರು), ಮುಬಾರಕ್ ( ಆಂಬುಲೆನ್ಸ್ ಡ್ರೈವರ್ ) ಅವರುಗಳನ್ನು ಸನ್ಮಾನಿಸಲಾಯಿತು.

ನಂತರ ಮಾತನಾಡಿದ ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಜಯಚಾಮರಾಜ ಒಡೆಯರ್ ರವರು ತಮ್ಮ ಜೀವನದುದ್ದಕ್ಕೂ ಪ್ರೀತಿ ವಾತ್ಸಲ್ಯ, ಸಾಹಿತ್ಯ, ಸಂಸ್ಕೃತಿ, ಕಲೆ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ದೀನ ದಲಿತರು ಮತ್ತು ಶೋಷಿತರ ಬಗ್ಗೆ ಅಂತಃಕರಣಪೂರ್ವಕವಾಗಿ ಅವರುಗಳ ಒಳಿತಿಗಾಗಿ ದಿಟ್ಟ ನಿರ್ಧಾರ ಕೈಗೊಂಡವರು ಎಂದು ತಿಳಿಸಿದರು.

ಜಯಚಾಮರಾಜ ಒಡೆಯರ್ ಅವರು ಕೃಷಿ ಮತ್ತು ರೈತರ ಬಗ್ಗೆ ಕೂಡ ವಿಶೇಷ ಆಸಕ್ತಿ ವಹಿಸಿ ಕಾರ್ಯಕ್ರಮಗಳನ್ನು ಜಾರಿಗೆ ತಂದವರು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ ರಾಜಣ್ಣ ರವರು ಮಾತನಾಡಿ, ಜಯಚಾಮರಾಜ ಒಡೆಯರ್ ರವರು ಸ್ವಾತಂತ್ರ್ಯ ಪೂರ್ವದಲ್ಲೇ ತಮ್ಮ ದೂರದರ್ಶಿತ್ವವನ್ನು ಇಡೀ ದೇಶಕ್ಕೆ ಪಂಚ ವಾರ್ಷಿಕ ಯೋಜನೆಯ ಮೂಲಕ ಕೊಟ್ಟಂಥವರು. ಮುಂದೆ 1952 ರಲ್ಲಿ ಅಂದಿನ ಪ್ರಧಾನಿ ನೆಹರುರವರು ಇದೇ ಯೋಜನೆಯನ್ನು ತಮ್ಮ ಆಳ್ವಿಕೆಯಲ್ಲಿ ಅಳವಡಿಸಿಕೊಂಡರು ಎಂದು ತಿಳಿಸಿದರು.

ಶರಾವತಿ ಜಲವಿದ್ಯುತ್ ಯೋಜನೆ ಅನುಷ್ಠಾನ ಹಾಗೆ ಸಾಹಿತ್ಯ ಮತ್ತು ಶಿಕ್ಷಣ ಪ್ರೇಮಿಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಕೂಡ ದೊಡ್ಡ ಮಟ್ಟದಲ್ಲೇ ಒತ್ತಾಸೆಯಾಗಿ ನಿಂತವರು. ಸ್ವತಃ ಸಂಗೀತ ಪ್ರೇಮಿಯಾಗಿ ಸಂಗೀತಗಾರರಾಗಿ ಹಲವಾರು ಕೀರ್ತನೆಗಳನ್ನು ಹಾಗೆ ತಮ್ಮ ಸುಧೀರ್ಘ ವಿದೇಶ ಪ್ರವಾಸಗಳ ಅನುಭವಗಳ ಹಿನ್ನೆಲೆಯಲ್ಲಿ ಹಲವಾರು ಹೊಸ ಅಭಿವೃದ್ಧಿಯ ಆಯಾಮಗಳನ್ನ ಮೈಸೂರು ಸಂಸ್ಥಾನದಲ್ಲಿ ಅನುಷ್ಠಾನಗೊಳಿಸಿ ತಂದ ಕೀರ್ತಿ ಜಯಚಾಮರಾಜ ಒಡೆಯರ್ ಅವರಿಗೆ ಸಲ್ಲುತ್ತದೆಂದರು.

ಈ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ. ಟಿ ಪ್ರಕಾಶ್ , ಕಾಂಗ್ರೆಸ್ ಮುಖಂಡರಾದ ಎನ್ ಎಂ ನವೀನ್ ಕುಮಾರ್ , ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಎಂ ಎನ್ ನವೀನ್ ಕುಮಾರ್ , ಲಕ್ಷ್ಮೀದೇವಿ , ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡಕೊಳ ಜಗದೀಶ್ , ಕೆಂಪೇಗೌಡ, ಗಂಗಾಧರ್ , ಬೆಟ್ಟೇಗೌಡ , ಕೇಬಲ್ ಮಹೇಶ್ , ಸುಚೀಂದ್ರ ,
ನವೀನ್ , ಮಂಜುನಾಥ್ ಹಾಗೂ ಇನ್ನಿತರರು ಹಾಜರಿದ್ದರು.