ಮೈಸೂರು: ಬಕ್ರೀದ್ ಹಬ್ಬ ಅಂಗವಾಗಿ ಕೃಷ್ಣರಾಜ ಯುವ ಬಳಗದ ವತಿಯಿಂದ ನಗರದ ನಂಜುಮಳಿಗೆಯಲ್ಲಿರುವ ಗೋಪಾಲಸ್ವಾಮಿ ಉದ್ಯಾನವನದಲ್ಲಿ ಹಿಂದೂ ಮುಸಲ್ಮಾನರು ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಬಕ್ರೀದ್ ಆಚರಣೆಯನ್ನು ಬುಧವಾರ ಅರ್ಥಪೂರ್ಣವಾಗಿ ಸೌಹಾರ್ದತೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣರಾಜೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಕೋವಿಡ್-2ನೇ ಅಲೆಯ ಲಾಕ್ ಡೌನ್ ಸಂದರ್ಭದಲ್ಲಿ ಸೌಹಾರ್ದತೆಯಲ್ಲಿ ಸಾಮಾಜಿಕ ಸೇವೆ ನಿರಾಶ್ರಿತರಿಗೆ ಆಹಾರ, ದಿನಸಿ ಕಿಟ್ ಹಾಗೂ ಆಕ್ಸಿಜನ್ ಸೇರಿದಂತೆ ಇನ್ನಿತರ ಸೇವಾ ಕಾರ್ಯದಲ್ಲಿ ಮುಸ್ಲಿಂ ಬಾಂಧವರು ನಮ್ಮೊಂದಿಗೆ ಸೇರಿ ಸೇವಾ ಕಾರ್ಯ ಮಾಡಿರುವುದು ಸ್ಮರಿಸಬಹುದು ಎಂದು ತಿಳಿಸಿದರು.
ಹಾಗೆಯೇ ತ್ಯಾಗ ಮತ್ತು ಬಲಿದಾನದ ಹಬ್ಬವೆಂದೇ ಕರೆಯಲಾಗುವ ಮುಸಲ್ಮಾನರ ಪವಿತ್ರ ಹಬ್ಬ ಬಕ್ರೀದ್ ಮುಸ್ಲಿಂ ಬಾಂಧವರು ಉತ್ಸಾಹ ಮತ್ತು ಕುಟುಂಬದ ಸದಸ್ಯರೊಂದಿಗೆ ಬಾಂಧವ್ಯದಿಂದ ಬೆರೆತು ಆಚರಿಸುತ್ತಾರೆ ಎಂದರು.
ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ಧವಾಗಿ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡವ ಯತ್ನಗಳು ನಡೆಯುತ್ತಿದ್ದು, ಆದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಯುವ ಮುಖಂಡ ನವೀನ್ ಕೆಂಪಿ, ಕೃಷ್ಣರಾಜ ಯುವ ಬಳಗದ ತೀರ್ಥಕುಮಾರ್, ಪಾಂಡು ನಾರಾಯಣ್, ಮಹೇಶ್, ರವಿಕುಮಾರ್, ಅನಿಲ್, ಇರ್ಫಾನ್ ಖಾನ್, ಇಮ್ರಾನ್ ಖಾನ್, ಅಯಾಜ್, ಶೌಕತ್, ರಹೀಮ್ ಪಾಷಾ, ವಸೀಮ್ ಪಾಷಾ ಹಾಗೂ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

