ಬೆಂಗಳೂರು: ಇಂದು ರಾಜೀನಾಮೆ ವಿಚಾರ. ಪ್ರಸ್ತಾಪಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಕಣ್ಣೀರಿಟ್ಟಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರಾರು? ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರ ರಾಜೀನಾಮೆ ಬಗ್ಗೆ ಸದಾಶಿವನಗರ ನಿವಾಸದಲ್ಲಿ ಸೋಮವಾರ ಡಿಕೆ.ಶಿವಕುಮಾರ್ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಯಡಿಯೂರಪ್ಪ ಅವರ ರಾಜೀನಾಮೆ ಹಿಂದೆ ಸಂತೋಷ ಕಾಣುತ್ತಿಲ್ಲ. ಬದಲಿಗೆ ಅವರ ನಿರ್ಧಾರದಲ್ಲಿ ನೋವು ಕಾಣುತ್ತಿದೆ. ಆ ನೋವು ಏನು? ಆ ನೋವು ಕೊಟ್ಟವರು ಯಾರು ಎಂಬುದನ್ನು ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ತಿಳಿಸಬೇಕು ಎಂದರು.
ರಾಜೀನಾಮೆ ಕುರಿತ ನಮ್ಮ ವಿಮರ್ಶೆಯನ್ನು ಮುಂದೆ ತಿಳಿಸುತ್ತೇವೆ. ಆದರೆ ಅದಕ್ಕೂ ಮೊದಲು ಮುಖ್ಯಮಂತ್ರಿಗಳು ತಮ್ಮ ನೋವಿನ ಬಗ್ಗೆ ಜನರಿಗೆ ತಿಳಿಸಬೇಕು. ಎರಡು ವರ್ಷಗಳಲ್ಲಿ ಜನರು ಕೋವಿಡ್ ಸಮಸ್ಯೆಗೆ ತುತ್ತಾಗಿದ್ದರಿಂದ ನೋವಾಯ್ತಾ? ಪಕ್ಷದ ಶಾಸಕರನ್ನು ಹೈಕಮಾಂಡ್ ನಿಯಂತ್ರಣ ಮಾಡಲಿಲ್ಲ ಎಂದು ನೋವಾಯ್ತಾ? ಎಂಬುದು ಜನರಿಗೆ ಗೊತ್ತಾಗಬೇಕು ಎಂದು ಹೇಳಿದರು.

