ಮೈಸೂರು: ಟಿಪ್ಪುಎಕ್ಸ್ಪ್ರೆಸ್ ರೈಲಿನ ಹೆರನ್ನು ಉದ್ದೇಶಪೂರ್ವಕವಾಗಿ ಬದಲಿಸಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಟಿಪ್ಪು ಏನು ಕೊಟ್ಟಿದ್ದಾರೆಂಬ ಬಗ್ಗೆ ಕೇವಲ ನಾಲ್ಕು ಉದಾಹರಣೆಗಳನ್ನು ಕೊಡಲಿ ಸಾಕು ಎಂದು ಸವಾಲು ಹಾಕಿದರು.
ಮೈಸೂರನ್ನು ಆಳ್ವಿಕೆ ಮಾಡಿದ ಮಾಹಾರಾಜರುಗಳು ನಾಡಿಗೆ ಸಾಕಷ್ಟು ಕೊಡಿಗೆ ನೀಡಿದ್ದಾರೆ. ಇದಕ್ಕೆ ನಾನು ಬೇಕಾದಷ್ಟು ಉದಾಹರಣೆಗಳನ್ನು ಕೊಡುತ್ತೇನೆ ಎಂದು ತಿಳಿಸಿದರು.
ಮೈಸೂರಿಗೆ ಒಡೆಯರ್ ಕಾಲದ ಕೊಡುಗೆಗಳನ್ನು ಸ್ಮರಿಸಿ ರೈಲಿಗೆ ಒಡೆಯರ್ ಎಕ್ಸ್ಪ್ರೆಸ್ ರೈಲು ಎಂದು ಮರು ನಾಮಕರಣ ಮಾಡಲಾಗಿದೆ.ಇದನ್ನು ನಾವು ಉದ್ದೇಶಪೂರ್ವಕವಾಗಿಯೇ ಮಾಡಿದ್ದೇವೆ ಎಂದು ಹೇಳಿದರು.
ರೈಲಿನ ಹೆಸರು ಬದಲಾವಣೆ ಮಾಡಿದ್ದಕ್ಕೆ ಟೀಕಿಸುವವರು ಟಿಪ್ಪುವಿನ ಕೊಡುಗೆ ಏನೆಂದು ಹೇಳಲಿ ಆನಂತರ ಮಾತನಾಡಲಿ ಎಂದು ತಿರುಗೇಟು ನೀಡಿದರು.
ಇನ್ನು ಮುಂದೆ ಇಂತಹ ಬದಲಾವಣೆಗಳು ನಿರಂತರವಾಗಿ ನಡೆಯಲಿವೆ ಎಂದು ಹೇಳುವ ಮೂಲಕ ಮೈಸೂರಿನಲ್ಲಿ ಕೆಲವು ಸ್ಥಳಗಳ ಹೆಸರು ಬದಲಾವಣೆಯಾಗುವ ಮುನ್ಸೂಚನೆ ನೀಡಿದರು ಪ್ರತಾಪ್ ಸಿಂಹ.

