ಮೈಸೂರು: ಅತ್ಯಾಧುನಿಕ ಸೆಮಿ ಕಂಡಕ್ಟರ್ ಉದ್ದಿಮೆಯನ್ನು ನಗರದಲ್ಲಿ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಐಟಿ – ಬಿಟಿ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.
2023ರ ಫೆಬ್ರವರಿ ವೇಳೆಗೆ ಅನುಮೋದನೆ ಪ್ರಕ್ರಿಯೆ ಮುಗಿಯಲಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಗರದಲ್ಲಿ ಅವರು ಹಲವು ಸ್ಥಳೀಯ ಕಂಪನಿಗಳ ಸಿಇಒಗಳ ಜತೆ ಸಮಾಲೋಚನೆ ನಡೆಸಿದ ನಂತರ ಮಾತನಾಡಿದರು.
ಸೆಮಿಕಂಡಕ್ಟರ್ ಫ್ಯಾಬ್ ಕಂಪನಿಗೆ ಈಗಾಗಲೇ ಸ್ಥಳವನ್ನು ಗುರುತಿಸಿ, ಭೂಮಿಯನ್ನು ಮೀಸಲಿಡಲಾಗಿದೆ.
ಆದರೆ ಕಂಪನಿ ಸ್ಥಾಪನೆಗೆ ಅಗತ್ಯವಾದ ಅನುಮತಿ ಪ್ರಕ್ರಿಯೆಗೆ 14 ತಿಂಗಳು ಹಿಡಿಯುತ್ತದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಜತೆ ದೆಹಲಿಯಲ್ಲಿ ಈ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು.
ಸೈಬರ್ ಸೆಕ್ಯುರಿಟಿ ಕುರಿತ ಉದ್ದಿಮೆ ಮೈಸೂರಿನಲ್ಲಿ ಬೃಹತ್ತಾಗಿ ಬೆಳೆಯಲು ತಕ್ಕ ಕಾರ್ಯ ಪರಿಸರ ನಿರ್ಮಿಸಲಾಗುತ್ತಿದೆ.
ನಮ್ಮಲ್ಲಿ ಅತ್ಯಂತ ವೇಗದಿಂದ ನಡೆಯುತ್ತಿರುವ ಡಿಜಿಟಲೀಕರಣ ಮತ್ತು ಉನ್ನತ ಶಿಕ್ಷಣ ಸುಧಾರಣೆ ಇದಕ್ಕೆ ವೇಗವರ್ಧಕದ ರೀತಿಯಲ್ಲಿ ಕೆಲಸ ಮಾಡಲಿವೆ ಎಂದು ಅವರು ತಿಳಿಸಿದರು.
ಉನ್ನತ ಶಿಕ್ಷಣದಲ್ಲಿ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಒಂದು ಸಂಸ್ಕೃತಿಯಾಗಿ ತರಲಾಗುತ್ತಿದೆ.ಹಾಗಾಗಿ ಶಿಕ್ಷಣ ಸಂಸ್ಥೆಗಳು ಇಂದು ನೇರವಾಗಿ ಉದ್ಯಮಗಳ ಜತೆ ಸಕ್ರಿಯ ಮತ್ತು ರಚನಾತ್ಮಕ ಸಹಭಾಗಿತ್ವ ಹೊಂದುತ್ತಿವೆ ಎಂದು ತಿಳಿಸಿದರು.
ಮೈಸೂರಿನ ಉದ್ಯಮಿಗಳು ಶಿಕ್ಷಣ ಸಂಸ್ಥೆಗಳ ಜೊತೆ ಅರ್ಥಪೂರ್ಣ ಸಂಬಂಧ ಇಟ್ಟುಕೊಳ್ಳಬೇಕೆಂದು ಅಶ್ವಥ್ ನಾರಾಯಣ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ. ವಿ. ನಾಯ್ಡು ಮತ್ತಿತಯ ಉಪಸ್ಥಿತರಿದ್ದರು.

