ಮೈಸೂರು: ರೌಡಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಿದವರಿಂದ ನಾನು ಪಾಠ ಕಲಿಯಬೇಕಾಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಜಯರಾಜ್, ಕೊತ್ವಾಲ್ ರಾಮಚಂದ್ರ, ಆಯಿಲ್ ಕುಮಾರ್ ನನ್ನು ಇಟ್ಟುಕೊಂಡು ರಾಜಕೀಯ ಮಾಡಿದವರು ಯಾರು ಎಂದು ಇಡೀ ಜನತೆಗೆ ಗೊತ್ತಿದೆ. ಅಂಥವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಹೇಳಿದರು.
ನಮ್ಮ ಪಕ್ಷಕ್ಕೆ ರೌಡಿಗಳನ್ನು ಸೇರಿಕೊಂಡು ರಾಜಕಿಯ ಮಾಡುವ ಅಗತ್ಯ ಇಲ್ಲ,
ನಮ್ಮ ಪಕ್ಷದ ಮುಖಂಡರಾದ ಅಪ್ಪಣ್ಣ ಅವರು ಪಕ್ಷಕ್ಕೆ ಹಲವಾರು ಮಂದಿ ಸೇರುತ್ತಿದ್ದಾರೆ,ಕಾರ್ಯಕ್ರಮ ಇದೆ ಬನ್ನಿ ಎಂದು ಹೇಳಿದ್ದರು ಹಾಗಾಗಿ ನಾನು ಹೋಗಿ ಪಕ್ಷಕ್ಕೆ ಸೇರಿದವರಿಗೆ ಶಾಲು ಹೊದಿಸಿದ್ದೇನೆ ಅಷ್ಟೇ ಎಂದು ತಿಳಿಸಿದರು.
ಬೆತ್ತನೆಗೆರೆ ಶಂಕರ್ ಬಗ್ಗೆ ನನಗೆ ಗೊತ್ತಿಲ್ಲ.ಪಕ್ಷ ಸೇರ್ಪಡೆಗೆ ಸಾವಿರಾರು ಜನರು ಬರುತ್ತಾರೆ. ಅವರ ಕುಂಡಲಿ, ಜಾತಕ ತೆಗೆದುಕೊಂಡು ನಾನು ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಾಪ್ ಸಿಂಹ ತಿಳಿಸಿದರು.
ಕಾಶ್ಮೀರದಲ್ಲಿ ಪ್ರತ್ಯೇಕದವಾದಿಗಳ ಬಾಯಿ ಮುಚ್ಚಿಸಿದ್ದೇವೆ. ನಮಗೆ ರೌಡಿಗಳ ಅವಶ್ಯಕತೆ ಇಲ್ಲ.
ನನ್ನದು ಅಭಿವೃದ್ಧಿ ರಾಜಕಾರಣ.ನನ್ನ ಹತ್ತಿರ ಎಲ್ಲರನ್ನೂ ಎದುರಿಸುವ ಶಕ್ತಿ ಇದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ಗೆದ್ದು ಬಂದಿದ್ದೇನೆ.
ಮೋದಿ ಕಾಲದಲ್ಲಿ ಭಯೋತ್ಪಾದಕರನ್ನೇ ಬಿಟ್ಟಿಲ್ಲ ನಮ್ಮನ್ನ ಬಿಡುತ್ತಾರಾ ಎಂಬ ಭಯ ರೌಡಿಗಳಿಗೆ ಇದೆ.
ಹಾಗಾಗಿ ರೌಡಿಗಳೇ ಮನಪರಿವರ್ತನೆಯಾಗಿ ಸಮಾಜಸೇವೆಗೆ ಬರುತ್ತಿದ್ದಾರೆ. ಬಿಜೆಪಿ ಗಟ್ಟಿಯಾದ ನಾಯಕತ್ವ ಕೊಟ್ಟಿದೆ. ಎಷ್ಟೋ ಜನ ಸಮಾಜ ಕಟ್ಟುವಲ್ಲಿ ಕೈ ಜೋಡಿಸಿದ್ದಾರೆ ಎಂದು ಸಿಂಹ ಟಾಂಗ್ ನೀಡಿದರು.

