ಬೆಂಗಳೂರು: ಕಾಂಗ್ರೆಸ್ ನವರು ಮತದಾರರಿಗೆ 2 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ.ಅಂತವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಕುಣಿಗಲ್ ನಲ್ಲಿ ಕಾಂಗ್ರೆಸ್ ನ ಶಾಸಕರು ಫೋಟೋ ಇರುವ ಕುಕ್ಕರ್ ಹಂಚುವ ವೇಳೆ ಸಿಕ್ಕಿಬಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಶಾಸಕರು ಸಿಕ್ಕಿಬಿದ್ದಾಗ ಕಮರ್ಷಿಯಲ್ ಟ್ಯಾಕ್ಸ್ ನವರು ನಾಲ್ಕು ಮಂದಿಗೆ ದಂಡ ವಿಧಿಸಿದ್ದಾರೆ ಅಂತವರು ನಮ್ಮ ಬಗ್ಗೆ ದೂರು ಕೊಡೋದೇನಿದೆ ಎಂದು ಟಾಂಗ್ ನೀಡಿದರು.
ಕಾಂಗ್ರೆಸ್ 200 ಯುನಿಟ್ ಕರೆಂಟ್, 2 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿದೆ. ಇದೆಲ್ಲಾ ನೋಡಿದರೆ ಅವರೂ ಕೂಡಾ ಅಪರಾಧಿಗಳೇ ಎಂದು ಸಿಎಂ ತಿಳಿಸಿದರು.
ಈ ಬಾರಿ ಚುನಾವಣೆಯಲ್ಲಿ ಸೋಲುತ್ತೇವೆ ಅಂತಾ ಗೊತ್ತಾಗಿದೆ.ಹಾಗಾಗಿ ಕಾಂಗ್ರೆಸ್ ಕೆಳಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಬೊಮ್ಮಾಯಿ ದೂರಿದರು.
ನಾವು ಕಾಂಗ್ರೆಸ್ ನಿಂದ ಪಾಠ ಕಲಿಯಬೇಕಿಲ್ಲ. ನಾವು ಅವರ ಬಗ್ಗೆ ನೂರು ಕಂಪ್ಲೆಂಟ್ ಕೊಡಬಹುದು ಆದರೆ ಜನರಿಗೆ ಸತ್ಯ ಗೊತ್ತಿರುತ್ತದೆ ಅವರೇ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.

