ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕ್ರಮ -ಶೋಭಾ ಕರಂದ್ಲಾಜೆ

ಮೈಸೂರು: ಹಣಕಾಸು ಹಾಗೂ ಇನ್ನಿತರ ಕಾರಣಗಳಿಂದಾಗಿ ಖಾಲಿ ಹುದ್ದೆಗಳನ್ನ ತುಂಬಲು ಸಾಧ್ಯವಾಗಿಲ್ಲ, ನಮ್ಮ ಸರ್ಕಾರ ಬಂದ ನಂತರ ಖಾಲಿ ಹುದ್ದೆ ತುಂಬಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು

ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ  ಶಕ್ತಿದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ದೇಶಾದ್ಯಂತ ಉದ್ಯೋಗ ಮೇಳದ ಮೂಲಕ ಉದ್ಯೋಗ ಕೊಡುವ ಮೂಲಕ  ನಿರುದ್ಯೋಗ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರ, ಬಿ.ಎಸ್ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರದ ಯೋಜನೆಗಳಲ್ಲಿ ಶೇ. 95 ರಷ್ಟು ಹಳ್ಳಿ ಹಳ್ಳಿಗೂ ತಲುಪಿದೆ ಎಂದು ತಿಳಿಸಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲನ್ನ ಸ್ಚೀಕರಿಸಿದ್ದೇವೆ, ಒಳ್ಳೆಯ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತೇವೆ. ಗೆಲುವು ಸಾಧಿಸಿರುವವರಿಗೆ ಶುಭವಾಗಲಿ ಎಂದು ಶೋಭಾ ಕರಂದ್ಲಾಜೆ ಹಾರೈಸಿದರು.

ಕೊಟ್ಟಿರುವ ಭರವಸೆಗಳನ್ನ ಈಡೇರಿಸುವ ಶಕ್ತಿ ಬರಲಿ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ‌ ತಿಳಿಸಿದರು.

ಮುಖ್ಯಮಂತ್ರಿ ಆಯ್ಕೆ ಅವರ ಪಕ್ಷದ ಆಂತರಿಕ ವಿಚಾರ. ಏನು ಭರವಸೆ ಕೊಟ್ಟಿದ್ದಾರೋ ನಮಗೆ ಗೊತ್ತಿಲ್ಲ. ಅವರ ಆಂತರಿಕ ಸಮಸ್ಯೆಯನ್ನ ಅವರೇ ಬಗ್ಗೆಹರಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಇಂದು ದೇಶಾದ್ಯಂತ ಯುವಕ ಯುವತಿಯರಿಗೆ 71 ಸಾವಿರ ಕೇಂದ್ರ ಸರ್ಕಾರದ ಉದ್ಯೋಗ ಕೊಡುವ ಕೆಲಸವಾಗುತ್ತಿದೆ.ಇದಕ್ಕೆ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಇದೇ ವೇಳೆ ಶೋಭಾ ಹೇಳಿದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಯುವಕ ಯುವತಿಯರಿಗೆ ಕೆಲಸ ಸಿಗುತ್ತದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚನೆ ಕೊಟ್ಟಿದೆ. ಅತಿ ಅಗತ್ಯವಾಗಿರುವ ಬೇರೆ ಬೇರೆ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನ ತುಂಬುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನೂತನ ಶಾಸಕ ಶ್ರೀವತ್ಸ, ಮೇಯರ್ ಶಿವಕುಮಾರ್, ಮಾಜಿ ಎಂ ಎಲ್ ಸಿ  ಸಿದ್ಧರಾಜು, ಸ್ಥಳೀಯ ಬಿಜೆಪಿ ಮುಖಂಡರು ಸಚಿವೆಗೆ ಸಾಥ್ ನೀಡಿದರು.