ಮರಗಳು ಇಲ್ಲದರ‌ ಬಗ್ಗೆ ವರದಿ ಸಿದ್ದಪಡಿಸಿ: ಬಿಬಿಎಂಪಿ ‌ಅಧಿಕಾರಿಗಳಿಗೆ ಡಿಕೆಶಿ ಸೂಚನೆ

ಬೆಂಗಳೂರು: ಬೆಂಗಳೂರಿನ ಎಷ್ಟು ರಸ್ತೆಗಳಲ್ಲಿ ಮರಗಳಿಲ್ಲ ಎಂಬುದರ ಬಗ್ಗೆ ‌ತಕ್ಷಣ ವರದಿ‌ ಸಿದ್ದಪಡಿಸಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಉಪ ಮುಖ್ಯ ಮಂತ್ರಿ ‌ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಡಿಕೆಶಿ ‌ಮಾತನಾಡಿದರು.

ಮರಗಳಿಲ್ಲದ ರಸ್ತೆಗಳಲ್ಲಿ ಸ್ಥಳೀಯ ಶಾಲಾ ಮಕ್ಕಳಿಂದ ಗಿಡ ನೆಡಿಸಿ, ಆ ಗಿಡವನ್ನು ಬೆಳೆಸುವ ಜವಾಬ್ದಾರಿಯನ್ನು ಆ ಮಕ್ಕಳಿಗೇ ನೀಡಬೇಕು ಎಂದು ಸಲಹೆ ನೀಡಿದರು.

ಇದಕ್ಕೆ ಬೇಕಾದ ಸಸಿಗಳು, ರಕ್ಷಾ ಪಂಜರಗಳನ್ನು ಪಾಲಿಕೆ ನೀಡಬೇಕು, ಆ ಗಿಡಕ್ಕೆ ಆ ಮಕ್ಕಳ ಹೆಸರು ಹಾಕಿಕೊಳ್ಳಲು ಅವಕಾಶ ನೀಡಬೇಕು. ಆ ಗಿಡವನ್ನು ಆ ಮಗು ಬೆಳೆಸಬೇಕು ಎಂದು ಹೇಳಿದರು.

ಈ ವಿಚಾರದಲ್ಲಿ ಮಕ್ಕಳಲ್ಲಿ ಸ್ಪರ್ಧೆ ಏರ್ಪಡಿಸಿ. ಆಗ ಮಕ್ಕಳು ಸಂತೋಷದಿಂದ, ಬಹಳ ಕಾಳಜಿಯಿಂದ ಗಿಡ, ಮರ ಬೆಳೆಸಲು ಆಸಕ್ತಿ ತೋರುತ್ತಾರೆ ಎಂದು ತಿಳಿಸಿದರು.

ನಾವು ಮಕ್ಕಳನ್ನು ಸಾಕುವಂತೆ ಮರ ಗಿಡಗಳನ್ನು ಬೆಳೆಸಬೇಕು. ಆಗ ಪರಿಸರ ದಿನಕ್ಕೆ ಅರ್ಥ ಬರುತ್ತದೆ ಎಂದು ‌ಡಿ.ಕೆ.ಶಿವಕುಮಾರ್ ಹೇಳಿದರು.

ಮುಂದಿನ ಒಂದು ತಿಂಗಳಲ್ಲಿ ಈ ಬಗ್ಗೆ ಒಂದು ಪರಿಪೂರ್ಣ ಯೋಜನೆ ರೂಪಿಸಬೇಕು. ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ನಾನು ಪಾಲಿಕೆ ಅಧಿಕಾರಿಗಳಿಗೆ ನೀಡುತ್ತಿರುವ ಮೊದಲನೆಯ ಟಾಸ್ಕ್ ಇದು ಎಂದು ತಿಳಿಸಿದರು.

ಮನುಷ್ಯನ ಬದುಕು ಪರಿಸರದ ಜತೆಗೆ ಬೆಸೆದುಕೊಂಡಿದೆ, ಮನುಷ್ಯ ತನ್ನ ಬದುಕಿನ ಪ್ರತಿ ಹಂತದಲ್ಲಿ ಪರಿಸರವನ್ನು ಉಳಿಸಿಕೊಂಡರೆ ಮಾತ್ರ ಆರೋಗ್ಯಕರ ಜೀವನ ನಡೆಸಬಹುದು.

ನಾವು ಹಸಿರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ. ಬದಲಾದ ಜೀವನಶೈಲಿಯಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ಲಾಸ್ಟಿಕ್ ಹಸಿರನ್ನು ನಮ್ಮ ಮನೆಗಳಲ್ಲಿ ಹಾಕಿಕೊಂಡು ಸಂತೋಷಪಡುವಂತಾಗಿದೆ.

ಹೀಗಾಗಿ ಪರಿಸರ ಸಂರಕ್ಷಣೆ ವಿಚಾರದಲ್ಲಿ ಅರಣ್ಯ ಇಲಾಖೆ, ಪಾಲಿಕೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಾಶ್ವತವಾದ ಯೋಜನೆಗಳ ಬಗ್ಗೆ ಗಮನ ಹರಿಸಬೇಕು ಎಂದು ‌ಡಿಸಿಎಂ ಆದೇಶಿಸಿದರು.

ನೀವು ಊಟಕ್ಕೆ ಮೀನು ಕೊಟ್ಟರೆ ಅದು ಒಂದು ಹೊತ್ತಿನ ಹೊಟ್ಟೆ ತುಂಬಿಸಲು ಸೀಮಿತವಾಗುತ್ತದೆ. ಅದೇ ನೀವು ಮೀನುಗಾರಿಕೆ ಕೌಶಲ್ಯ ಕಲಿಸಿದರೆ ಅದು ಜೀವನಪೂರ್ತಿ ನೆರವಾಗುತ್ತದೆ.

ಹೀಗಾಗಿ ಅಧಿಕಾರಿಗಳು ಜೀವನಪೂರ್ತಿ ಪ್ರಯೋಜನವಾಗುವಂತಹ ಯೋಜನೆಗಳನ್ನು ಸಮಾಜಕ್ಕೆ ರೂಪಿಸಬೇಕು ಎಂದು ಹೇಳಿದರು.

ಉದ್ಯಾನವನಗಳಲ್ಲಿ ಮರಗಳನ್ನು ಬೆಳೆಸುವುದರಲ್ಲಿ ಅರ್ಥವಿಲ್ಲ. ಉದ್ಯಾನವನಗಳು ಉದ್ಯಾನವನಗಳ ರೀತಿ ಇರಲಿ. ಉದ್ಯಾನವನಗಳಲ್ಲಿ ಅರಣ್ಯ ನಿರ್ಮಿಸುವುದು ಬೇಡ.

ಎಲ್ಲಿ ಮರಗಳು ಇಲ್ಲವೋ ಅಲ್ಲಿ ಗಿಡ ನೆಡುಬೇಕು,ಪರಿಸರ ಸಂರಕ್ಷಣೆ ದೀರ್ಘಕಾಲದ ಯೋಜನೆ ಬೇಕು.

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು 5 ಕೋಟಿ ಗಿಡ ನೆಡುವ ಕಾರ್ಯಕ್ರಮ ಮಾಡಿದ್ದರು. ಅದರಲ್ಲಿ 1 ಕೋಟಿ ಮರಗಳಾದರೂ ಉಳಿದುಕೊಂಡಿವೆ ಅದೇ‌ ಸಮಾಧಾನ ಎಂದರು.

ಬೆಂಗಳೂರು ತನ್ನ ಹಸಿರು ಪರಿಸರದಿಂದ ಹೆಸರು ಮಾಡಿದೆ. ಹೀಗಾಗಿ ಬೆಂಗಳೂರಿನಲ್ಲಿ ಹಸಿರಿನ ಪ್ರಮಾಣ ಹೆಚ್ಚಿಸಲು ಸೂಕ್ತ ಯೋಜನೆ ರೂಪಿಸಬೇಕು.

ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಪರಿಸರ ಸಂರಕ್ಷಣೆ ಕೆಲಸ ಮಾಡಬೇಕು ಎಂದು ಡಿಕೆಶಿ ತಿಳಿಸಿದರು.