ಲಕ್ನೋ: ಮಥುರಾ ಶ್ರೀಕೃಷ್ಣ ಜನ್ಮಭೂಮಿ ವಿವಾದ ಸಂಬಂಧ ಸಮೀಕ್ಷೆ ನಡೆಸಲು ನ್ಯಾಯಾಲಯ ಗ್ರೀನ್ ಸಿಗ್ನಲ್ ನೀಡಿದೆ
ಶ್ರೀ ಕೃಷ್ಣ ಜನ್ಮ ಭೂಮಿಯಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾದ ಶಾಹಿ ಈದ್ಗಾ ಮಸೀದಿಯಲ್ಲಿ ಹಾಗೂ ಮಥುರಾ ದೇವಾಲಯ ಆವರಣದಲ್ಲಿ ಸಮೀಕ್ಷೆ ನಡೆಸಲು ಅಲಹಾಬಾದ್ ಹೈಕೋರ್ಟ್ ಸಮ್ಮತಿ ನೀಡಿದೆ.
ಜ್ಞಾನವ್ಯಾಪಿ ಮಸೀದಿ ಮಾದರಿಯಲ್ಲೇ ಅಂದರೆ ಡಿಸೆಂಬರ್ 18 ರೊಳಗೆ ಸರ್ವೆ ಮಾಡುವಂತೆ ಕೋರ್ಟ್ ಸೂಚಿಸಿದೆ.
ಮಸೀದಿ ಪರಿಶೀಲಿಸಲು ಆಯುಕ್ತರನ್ನು ನೇಮಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಪುರಸ್ಕರಿಸಿದ ನ್ಯಾ. ಮಯಾಂಕ್ ಕುಮಾರ್ ಜೈನ್ ಅವರಿದ್ದ ಪೀಠ ಮೂವರು ಅಧಿಕಾರಿಗಳಿರುವ ಆಯೋಗ ರಚಿಸುವಂತೆ ಸೂಚಿಸಿದೆ.
ಶ್ರೀ ಕೃಷ್ಣನ ಜನ್ಮಸ್ಥಳವು ಮಸೀದಿಯ ಕೆಳಗೆ ಇದೆ ಮತ್ತು ಮಸೀದಿಯು ಹಿಂದೂ ದೇವಾಲಯವಾಗಿದೆ ಎಂದು ತೋರಿಸುವ ಹಲವು ಚಿಹ್ನೆಗಳು ಇವೆ. ಹೀಗಾಗಿ ಮಸೀದಿಯನ್ನು ಪರಿಶೀಲಿಸಲು ಆಯೋಗವನ್ನು ಸ್ಥಾಪಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಹಿಂದೂ ದೇವಾಲಯಗಳ ವಿಶಿಷ್ಟ ಲಕ್ಷಣವಾಗಿರುವ ಕಮಲದ ಆಕಾರದ ಸ್ತಂಭವು ಅಸ್ತಿತ್ವದಲ್ಲಿದೆ. ಕೃಷ್ಣ ಜನಿಸಿದ ರಾತ್ರಿ ಆತನನ್ನು ರಕ್ಷಿಸಿದ ಹಿಂದೂ ದೇವತೆಗಳಲ್ಲಿ ಒಬ್ಬನಾದ ಶೇಷನಾಗನ ಚಿತ್ರವೂ ಇದೆ. ಮಸೀದಿಯ ಕಂಬದ ತಳದಲ್ಲಿ ಹಿಂದೂ ಧಾರ್ಮಿಕ ಚಿಹ್ನೆಗಳು ಮತ್ತು ಕೆತ್ತನೆಗಳು ಸಹ ಗೋಚರಿಸುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಶಾಹಿ ಈದ್ಗಾ ಮಸೀದಿಯನ್ನು ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ 1669-70ರಲ್ಲಿ ಶ್ರೀಕೃಷ್ಣನ ಜನ್ಮಸ್ಥಳದ ಸಮೀಪವಿರುವ ಕತ್ರಾ ಕೇಶವ್ ದೇವ್ ದೇವಸ್ಥಾನದ ಬಳಿ ನಿರ್ಮಿಸಲಾಗಿದೆ.
13.37 ಎಕರೆ ಜಾಗದಲ್ಲಿ ಹರಡಿರುವ ಶ್ರೀಕೃಷ್ಣ ಜನ್ಮಭೂಮಿ ದೇವಸ್ಥಾನದ ಒಂದು ಭಾಗವನ್ನು ಕೆಡವಿ ಶಾಹಿ ಈದ್ಗಾ ಮಸೀದಿಯನ್ನು ನಿರ್ಮಿಸಲಾಗಿದೆ.
ಈ ಜಾಗದ ಸಂಪೂರ್ಣ ಹಕ್ಕು ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ನೀಡಬೇಕು, ಶಾಹಿ ಈದ್ಗಾ ಮಸೀದಿಯನ್ನು ತೆರವು ಮಾಡಿ ಮಂದಿರಕ್ಕೆ ಭೂಮಿಯನ್ನು ವಾಪಸ್ ನೀಡುವಂತೆ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.
ಇದೀಗ ಅಲಹಾಬಾದ್ ಹೈಕೋರ್ಟ್ ಸಮೀಕ್ಷೆಗೆ ಆದೇಶಿಸಿರುವುದು ಅರ್ಜಿದಾರರಿಗೆ ಸಮಾಧಾನ ತಂದಿದೆ.

