ಚಾಮುಂಡಿ ಬೆಟ್ಟದಲ್ಲಿ ಅರಣ್ಯ ನಾಶ: ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳ ಬೆಂಕಿ ಹಾಕಿದ ಕೃತ್ಯದಿಂದ 100 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ನಾಶವಾಗಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮೈಸೂರಿನ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾ ಪಡೆ ವತಿಯಿಂದ ಪ್ರತಿಭಟನೆ ನಡೆಸಿ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಜಿಲ್ಲಾಡಳಿತ ಕೂಡಲೇ 100 ಎಕರೆ ಪ್ರದೇಶದಲ್ಲಿ ಎರಡು ಪಟ್ಟು, ಗಿಡ ಮರಗಳನ್ನು ನೆಡಬೇಕು, ಜತೆಗೆ ಇವುಗಳನ್ನು ಸಂರಕ್ಷಣೆ ಮಾಡಬೇಕು, ಹೆಚ್ಚು ಹೆಚ್ಚು ಅರಳಿ ಮರಗ‌ಳನ್ನು ನೆಡಬೇಕು ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ತೇಜೇಶ್ ಲೋಕೇಶ್ ಗೌಡ ಒತ್ತಾಯಿಸಿದರು.

ನಿನ್ನೆ ನಡೆದ ಈ ಘಟನೆಯನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿ ಚಾಮುಂಡಿ ಬೆಟ್ಟಕ್ಕೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಪ್ರತಿ ದಿನ ಪೋಲೀಸ್ ಜೀಪು ಎರಡು- ಮೂರು ಬಾರಿ ಚಾಮುಂಡಿ ಬೆಟ್ಟ ಗಸ್ತು ತಿರುಗುವ ವ್ಯವಸ್ಥೆ ಮಾಡಬೇಕು,ಈ ರೀತಿ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕೆಂದು ಕೋರಿದರು.

ಪ್ರತಿಭಟನೆಯಲ್ಲಿ ಕೃಷ್ಣಪ್ಪ, ಪ್ರಭುಶಂಕರ್, ಪ್ರಜೀಶ್, ಶಿವಲಿಂಗಯ್ಯ, ನೇಹಾ, ವರಕೂಡು ಕೃಷ್ಣೇಗೌಡ, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಸುನೀಲ್ ಕುಮಾರ್, ಎಳನೀರು ರಾಮಣ್ಣ, ಬಸವರಾಜು, ಮಂಜುಳಾ, ನಾಗರಾಜು, ಕುಮಾರ್ ಗೌಡ, ರಘು ಅರಸ್, ಗೀತಾ ಗೌಡ, ದರ್ಶನ್ ಗೌಡ, ಪ್ರಭಾಕರ್, ಸುಬ್ಬೇಗೌಡ, ಅಕ್ಬರ್, ಸ್ವಾಮಿ ಗೌಡ, ಭಾಗ್ಯಮ್ಮ, ರವೀಶ್, ಪರಿಸರ ಚಂದ್ರು, ವಿಷ್ಣು ಮತ್ತಿತರರು ಪಾಲ್ಗೊಂಡಿದ್ದರು.