ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದ 6 ಆರೋಪಿಗಳಿಗೆ 7ವರ್ಷ ಕಠಿಣ ಶಿಕ್ಷೆ

ಮೈಸೂರು: ಮಹಿಳೆಯ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದ ಆರು ಆರೋಪಿಗಳಿಗೆ 7ವರ್ಷ ಕಠಿಣ ಸಜೆ ಮತ್ತು ತಲಾ ರೂ.10,000 ರೂ. ದಂಡ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಮೈಸೂರು ನಿವಾಸಿಗಳಾದ ಶಿವಕುಮಾರ್, ಹರೀಶ್ ಯಾದವ್, ಶರತ್ @ ಶರತ್ ಕುಮಾರ್,ಸುನಿಲ್ ಕುಮಾರ್, ಶಶಾಂಕ್.ಎಸ್ @ ತೇಜಸ್ @ ಆಫಿಸಿಯಲ್, ಕಾರ್ತಿಕ್ ಅವರುಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಅಪರಾಧಿಗಳು 20-08-2020 ರಂದು ದರೋಡೆ ಮಾಡಲು ಮೈಸೂರಿನ ಮಹದೇವಪುರದ ನಾಗರತ್ನಮ್ಮ ಅವರ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಸಿ ಮನೆಯ ಬೀರುವಿನಲ್ಲಿದ್ದ ಚಿನ್ನದ ಆಭರಣಗಳು,17,000 ನಗದು, 2 ಮೊಬೈಲ್‌ ಗಳನ್ನು ದೋಚಿದ್ದರು.

ನಂತರ ಆಭರಣಗಳನ್ನು ಮಾರಾಟ ಮಾಡಿದ್ದು, ತನಿಖೆ ವೇಳೆ 1 ಮತ್ತು 2ನೇ ಆರೋಪಿತರ ಹೇಳಿಕೆ ಮೇರೆಗೆ ಫಿರ್ಯಾದಿದಾರರ ಮನೆಯಿಂದ ಆರೋಪಿತರು ದರೋಡೆ ಮಾಡಿದ್ದ ಆಭರಣಗಳು ಮತ್ತು 2 ಮೊಬೈಲ್‌ಗಳು ಜಪ್ತಿ ಮಾಡಿರುವುದು ಪ್ರಕರಣದ ಸಾಕ್ಷ್ಯಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ಎಲ್ಲಾ ಆರೋಪಿತರ ವಿರುದ್ಧ ವಿದ್ಯಾರಣ್ಯಪುರಂ ಆರಕ್ಷಕ ನಿರೀಕ್ಷಕ ಮಂಜುನಾಥ್ ಅವರು ದೋಷಾರೋಪಣಾ ಪತ್ರ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ನ್ಯಾಯಾಧೀಶ ಎಂ.ರಮೇಶ ಅವರು ಅಭಿಯೋಜನೆ ಪರ ಹಾಜರುಪಡಿಸಿದ ಸಾಕ್ಷಿಗಳನ್ನು ಮತ್ತು ದಾಖಲಾತಿಗಳನ್ನು ಪರಿಗಣಿಸಿ ಪ್ರಕರಣದಲ್ಲಿ ಆರೋಪಿತರು ಅಪರಾಧ ಎಸಗಿರುವುದು ರುಜುವಾತಾಗಿರುವುದಾಗಿದ್ದು 6 ಮಂದಿ ಆರೋಪಿಗಳಿಗೆ 7 ವರ್ಷಗಳ ಕಠಿಣ ಸಜೆ ಮತ್ತು ತಲಾ 10,000 ದಂಡ ವಿಧಿಸಲಾಗಿದೆ. ಮತ್ತು 7 ವರ್ಷ ಸಾದಾ ಸಜೆ ಮತ್ತು ತಲಾ 5,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದಲ್ಲಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಕೆ.ನಾಗರಾಜು ಅವರು ಸರ್ಕಾರದ ಪರ ವಾದ ಮಂಡಿಸಿದರು.