ಬಿಜೆಪಿ ಸುಭದ್ರ,ಶಕ್ತಿಯುತವಾಗಿದೆ: ಅಯೋಗ್ಯ ಪದ ಬಳಸಿ ಡಿಕೆಶಿಗೆ ಬಿವೈವಿ ಟಾಂಗ್

ಬೆಂಗಳೂರು: ಬಿಜೆಪಿ ಸುಭದ್ರ ಹಾಗೂ ಶಕ್ತಿಯುತವಾಗಿದೆ, ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂದು ಹೇಳಿದ ಅಯೋಗ್ಯರು ಯಾರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರವಾಗಿ ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವೂ ಇದೀವಿ ಎಂದು ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು.

ಯಾವ ಅಯೋಗ್ಯ ಇದನ್ನು ಹೇಳಿರೋದು, ನಮಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿಲ್ಲ. ಕಾಂಗ್ರೆಸ್‌ನವರಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ ನಮಗಲ್ಲ ಎಂದು ಟಾಂಗ್ ನೀಡಿದರು.

ಭಾನುವಾರವಷ್ಟೇ ನಮ್ಮ ಪಕ್ಷದ ಸಂಸ್ಥಾಪನಾ ದಿನ ಮಾಡಿದ್ದೇವೆ. ವಿಶ್ವದ ಅತೀ ದೊಡ್ಡ ಪಕ್ಷ ಬಿಜೆಪಿ. ಕಾಂಗ್ರೆಸ್‌ಗೆ ಇವತ್ತು ಯಾವ ಪರಿಸ್ಥಿತಿ ಬಂದಿದೆ ಎಂದು ಎಲ್ಲರಿಗೂ ಗೊತ್ತಿದೆ. ನಾವು ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿಲ್ಲ ಎಂದು ಹೇಳಿದರು.

ಚುನಾವಣೆಗಳು ಇಲ್ಲದಿದ್ದರೂ ಜನಹಿತಕ್ಕಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮದೇ ಆದ ಕೆಲ ತಪ್ಪುಗಳಿಂದ ನಾವು ಈ ಬಾರಿ ಅಧಿಕಾರಕ್ಕೆ ಬರದಿರಬಹುದು ಅಷ್ಟೇ. ಕಾಂಗ್ರೆಸ್‌ನವರು ಅನೇಕ ಹೋರಾಟ ಮಾಡಿದ್ದೇ ಚುನಾವಣೆಗಳು ಹತ್ತಿರ ಬಂದಾಗ. ಡಿಕೆಶಿ ಮೇಕೆದಾಟು ಪಾದಯಾತ್ರೆ ಮಾಡಿದ್ದು ಚುನಾವಣೆಗಾಗಿಯೇ ಎಂದು ವಿಜಯೇಂದ್ರ ತಿರುಗೇಟು ನೀಡಿದರು.

ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಪೊಲೀಸರು ಕ್ರೂರವಾಗಿ ನಡೆದುಕೊಂಡಿದ್ದಾರೆ. ಬೇಲ್ ಸಿಕ್ಕ ಮೇಲೂ ಪೊಲೀಸರು ವಿನಯ್ ಮನೆಗೆ ಹೋಗುತ್ತಾರೆ ಎಂದರೆ ಏನು ಹೇಳೋದು? ಈ ಪ್ರಕರಣ ಇಲ್ಲಿಗೇ ಬಿಡುವುದಿಲ್ಲ. ಕಾನೂನು ಹೋರಾಟ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.