ಲಗ್ನಪತ್ರಿಕೆ ಕೊಡುವ ನೆಪದಲ್ಲಿ ಬಂದ ಯುವಕ, ಯುವತಿ ಅಜ್ಜಿಯ ಕಟ್ಟಿಹಾಕಿ ದರೋಡೆ

ಸಾಲಿಗ್ರಾಮ: ಇತ್ತೀಚಿನ ದಿನಗಳಲ್ಲಿ ಯಾರೇ ಮನೆಗೆ ಬಂದರೂ ನಂಬುವಂತಿಲ್ಲ,ಹಾಗಾಗಿದೆ,ಅದಕ್ಕೆ ಸಾಲಿಗ್ರಾಮದಲ್ಲೊಂದು ಉದಾಹರಣೆ ಇದೆ.

ಹಗಲಿನ ವೇಳೆಯಲ್ಲೇ ಲಗ್ನಪತ್ರಿಕೆ ಕೊಡುವ ನೆಪದಲ್ಲಿ ಯುವಕ ಹಾಗೂ ಯುವತಿ ಮನೆಗೆ ಬಂದು ವೃದ್ದೆಯ ಕೈಕಾಲು ಕಟ್ಟಿಹಾಕಿ ಹಲ್ಲೆ ಮಾಡಿ 4 ಲಕ್ಷ ಮೌಲ್ಯದ ಚಿನ್ನದ ಸರ ದರೋಡೆ ಮಾಡಿದ ಘಟನೆ ನಡೆದಿದೆ.

ಕೆ.ಆರ್.ನಗರ ತಾಲೂಕು ಸಾಲಿಗ್ರಾಮದ ಹರದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಶೈಲಾ(76) ಎಂಬವರನ್ನ ಕಟ್ಟಿಹಾಕಿ ಹಲ್ಲೆ ನಡೆಸಿ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.

ಅಪರಿಚಿತ ಯುವಕ ಹಾಗೂ ಯುವತಿ ವಿರುದ್ದ ಮಹಿಳೆಯ ಸಂಬಂಧಿ ಅನುರಾಗ್ ಅರಸ್ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಮನೆಯಲ್ಲಿ ಶೈಲಾ ಅವರು ಒಬ್ಬರೆ ಇದ್ದರು.ಆಗ ಯುವಕ,ಯುವತಿ ಮದುವೆ ಲಗ್ನಪತ್ರಿಕೆ ಕೊಡುವ ನೆಪದಲ್ಲಿ ಬಂದಿದ್ದಾರೆ.

ಕುಡಿಯಲು ನೀರು ಬೇಕು ಎಂದು ಕೇಳಿದ್ದಾರೆ.ಶೈಲಾ ಅವರು ಹಾಗೆಯೇ ಟೀ ಮಾಡಿಕೊಂಡು ಬರುವುದಾಗಿ ಒಳಗೆ ತೆರಳಿದ್ದಾರೆ.

ಈ ವೇಳೆ ಜೋಡಿ ಶೈಲಾ ಅವರ ಮೇಲೆ ಹಲ್ಲೆ ನಡೆಸಿ ಕೈಕಾಲು ಕಟ್ಟಿಹಾಕಿ ಚಿನ್ನದ ಸರ ಕಿತ್ತುಕೊಂಡು ನಂತರ ಬಲವಂತವಾಗಿ ಬೀರು ಬೀಗ ಪಡೆದು ಮತ್ತಷ್ಟು ಚಿನ್ನಾಭರಣಕ್ಕಾಗಿ ಹುಡುಕಾಡಿ ಸಿಗದೆ ಪರಾರಿಯಾಗಿದ್ದಾರೆ.

ಅನುರಾಗ್ ಅರಸ್ ಅವರು ಮನೆಗೆ ಬಂದಾಗ ಗಾಯಗೊಂಡ ಶೈಲಾರಿಗೆ ಆರೈಕೆ ಮಾಡಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಈ ಸಂಭಂಧ ಸಾಲಿಗ್ರಾಮ ಪೊಲೀಸ್ ಠಾಣೆಗೆ ಅನುರಾಗ್ ಅರಸ್ ದೂರು ನೀಡಿದ್ದಾರೆ.ಈ ಜೋಡಿ ವಿರುದ್ಧ ದರೋಡೆ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹಾಗೂ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದವು.