ಸಿದ್ದರಾಮಯ್ಯನವರನ್ನ ಉಚ್ಛಾಟನೆ ಮಾಡೋ ಧಮ್ ಇದೆಯಾ:ಅಶೋಕ್ ಪ್ರಶ್ನೆ

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಸಿದ್ದರಾಮಯ್ಯನವರನ್ನ ಪಕ್ಷದಿಂದ ಉಚ್ಛಾಟನೆ ಮಾಡೋ ಧಮ್ ಇದೆಯಾ ಡಿ.ಕೆ ಶಿವಕುಮಾರ್ ಅವರೇ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಉತ್ತರನ ಪೌರುಷ ಒಲೆಯ ಮುಂದೆ ಎಂಬ ಹಾಗೆ ನಿಮ್ಮ ಪ್ರತಾಪ ಬರೀ ಮಾಧ್ಯಮಗಳ ಮುಂದೆ ಡೈಲಾಗ್ ಹೊಡೆಯೋದಕ್ಕೆ ಮಾತ್ರ ಸೀಮಿತನಾ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ ಒಂದೇ ಒಂದು ಸಭೆ ಮಾಡಲೂ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದೀರಲ್ಲ, ನಿಮಗೆ ನಿಜವಾಗಿಯೂ ತಾಕತ್ತಿದ್ದರೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಕಪ್ಪು ಬಾವುಟ ತೋರಿಸಿದ್ದ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಪಕ್ಷದಿಂದ ಉಚ್ಛಾಟನೆ ಮಾಡಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ನಿಮ್ಮ ಪಕ್ಷದ ಸರ್ವೋಚ್ಚ ನಾಯಕಿ ಪ್ರಧಾನಿ ಆಗಿದ್ದಾಗ ಕಪ್ಪು ಬಾವುಟ ತೋರಿಸಿದ್ದ ವ್ಯಕ್ತಿಯನ್ನ ಪಕ್ಷಕ್ಕೆ ಕರೆದುಕೊಂಡು ಬಂದು ಎರಡೆರಡು ಬಾರಿ ಮುಖ್ಯಮಂತ್ರಿ ಮಾಡಿ, ಅವರ ಋಣದಲ್ಲಿ ಅಧಿಕಾರ ಅನುಭವಿಸುತ್ತಿದ್ದೀರಲ್ಲ,ಬಿಜೆಪಿ ಮಾಡುವ ಪ್ರತಿಭಟನೆಗೆ ಧಮ್ಕಿ ಹಾಕುವ ಯಾವ ನೈತಿಕತೆ ಇದೆ ತಮಗೆ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.