ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಸೇರಿ 25 ಪ್ರಮುಖರಿಗೆ ಹೆಚ್ಚಿನ ಭದ್ರತೆ

ನವದೆಹಲಿ: ಆಪರೇಷನ್ ಸಿಂಧೂರದ ಬಳಿಕ ವಿದೇಶಾಂಗ ಸಚಿವ ಎಸ್.ಜೈಶಂಕರ್ ಸೇರಿ 25 ಪ್ರಮುಖರಿಗೆ ಭದ್ರತೆ ಹೆಚ್ಚಿಸಲಾಗಿದೆ.

ಅಷ್ಟೂ ಮಂದಿಗೂ ಬುಲೆಟ್ ಪ್ರೂಫ್ ಕಾರು, ಕಮಾಂಡೋ ಸೆಕ್ಯೂರಿಟಿಯನ್ನು ನೀಡಲಾಗಿದೆ.

ಏ.22ರಂದು ನಡೆದ ಪಹಲ್ಗಾಮ್ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಜೋರಾಗಿದ್ದು, ಕದನ ವಿರಾಮ ಘೋಷಣೆಯಾದ ಬಳಿಕ ವಿದೇಶಾಂಗ ಸಚಿವಾಲಯದ ವಿನಂತಿ ಮೇರೆಗೆ 25 ಪ್ರಮುಖರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರು ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

25 ವಿಐಪಿಗಳ ಪಟ್ಟಿಯನ್ನು ತಯಾರಿಸಲಾಗಿದ್ದು,ಈ ಪಟ್ಟಿಯಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ಜೆ.ಪಿ ನಡ್ಡಾ, ಭೂಪೇಂದರ್ ಯಾದವ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಸುಧಾಂಶು ತ್ರಿವೇದಿ ಹಾಗೂ ಬಿಜೆಪಿಯ ಪ್ರಮುಖ ನಾಯಕ ಮುರಳಿ ಮನೋಹರ್ ಜೋಶಿ ಅವರ ಹೆಸರಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ Z ಸೆಕ್ಯೂರಿಟಿ ಹೊಂದಿರುವ ಜೈಶಂಕರ್ ಅವರಿಗೆ ಮತ್ತೆ ಭದ್ರತೆ ಹೆಚ್ಚಿಸಲಾಗಿದ್ದು, ಒಂದು ಬುಲೆಟ್ ಪ್ರೂಫ್ ಕಾರು, 4-6 ಕಮಾಂಡೋ ಸೇರಿ 22 ಸಿಬ್ಬಂದಿ, ಭದ್ರತೆಗೆ ಬೆಂಗಾವಲು ವಾಹನಗಳು, 33 ಸಿಆರ್‌ಪಿಎಫ್ ಕಮಾಂಡೋ ಹಾಗೂ ದಿನದ 24/7 ಭದ್ರತೆ ನೀಡಲಾಗಿದೆ. ಜೊತೆಗೆ ದೆಹಲಿಯಲ್ಲಿರುವ ಸರ್ಕಾರಿ ನಿವಾಸಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಭದ್ರತೆಗಾಗಿ ಒದಗಿಸುತ್ತಿರುವ ಕಾರುಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಇರಿಸುವಂತೆ ಹಾಗೂ ಭದ್ರತಾ ಸಿಬ್ಬಂದಿಗೆ ಫೈರಿಂಗ್ ಹಾಗೂ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಕುರಿತು ತರಬೇತಿ ನೀಡುವಂತೆ ಸೂಚಿಸಲಾಗಿದೆ.

ಮೇ 7ರಂದು ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ನಲ್ಲಿ ಪಾಕ್‌ನ 9 ಭಯೋತ್ಪಾದಕ ತಾಣಗಳ ಮೇಲೆ ದಾಳಿ ನಡೆಸಲಾಗಿತ್ತು.

ಪಾಕ್ ನಿಯಂತ್ರಣ ರೇಖೆ, ಜಮ್ಮು ಮತ್ತು ಕಾಶ್ಮೀರದಾದ್ಯಂತ ಅಪ್ರಚೋದಿತ ಶೆಲ್ ದಾಳಿ ನಡೆಸಿತು. ಮೇ 10ರಂದು, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ. ಇದರ ನಡುವೆ 25 ಮಂದಿಗೆ ಬಿಗಿ‌ ಭದ್ರತೆ ಹೆಚ್ಚಿಸಲಾಗಿದೆ.