ಮೈಸೂರು: ರಾಜ್ಯದಲ್ಲಿರುವುದು ವಸೂಲಿ, ಕಮಿಷನ್ ಸರ್ಕಾರ. ಬೆಲೆ ಏರಿಕೆ ಭ್ರಷ್ಟಾಚಾರವೇ ಇವರ ಸಾಧನೆ ಎಂದು ಮಾಜಿ ಸಚಿವ ಸಿ.ಎನ್ ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕರೊಂದಿಗೆ ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತು ಚಾರ್ಜ್ ಶೀಟ್ ಬಿಡುಗಡೆ ಮಾಡಿದ ವೇಳೆ ಅಶ್ವಥ್ ನಾರಾಯಣ್ ಮಾತನಾಡಿದರು.
2 ವರ್ಷದ ಹಿಂದೆ ಬಹಳಷ್ಟು ನಿರೀಕ್ಷೆಯೊಂದಿಗೆ ರಾಜ್ಯದ ಜನರು ಕಾಂಗ್ರೆಸ್ ಪಾರ್ಟಿಗೆ ಅಧಿಕಾರ ನೀಡಿದರು.ಆದರೆ ಎರಡು ವರ್ಷದಲ್ಲಿ ರಾಜ್ಯದ ಜನರ ಬದುಕನ್ನು ಈ ಸರ್ಕಾರ ಬರ್ಬಾದ್ ಮಾಡಿದೆ. ಎರಡು ವರ್ಷ ಪೂರೈಸಿದ್ದರಿಂದ ಸಾಧನಾ ಸಮಾವೇಶ ಮಾಡಿತ್ತಿದ್ದಾರೆ. ಸಿಎಂ ಹಾಗೂ ಸಚಿವರನ್ನು ಹೊರತುಪಡಿಸಿದರೆ ಬೇರೆ ಯಾರು ಕೂಡ ಸಂತೋಷವಾಗಿಲ್ಲ ಎಂದು ಟೀಕಿಸಿದರು.
ಇದು ವಸೂಲಿ ಸರ್ಕಾರ, ಭ್ರಷ್ಟ ಸರ್ಕಾರ, ಕಮೀಷನ್ ಸರ್ಕಾರ, ಕೆಲವೆಡೆ 60% ಮತ್ತೆ ಕೆಲವೆಡೆ 100% ವಸೂಲಿ ಮಾಡೋ ಸರ್ಕಾರ, ಅಲ್ಪಸಂಖ್ಯಾತರ ತುಷ್ಠೀಕರಣ ಎಂಬುದು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಕರೆಯಬಹುದು ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿ ಶೂನ್ಯ ಸೇರಿದಂತೆ ಹಲವಾರು ರಂಗಗಳಲ್ಲಿ ವಿಫಲವಾಗಿರುವುದೇ ಇವರ ಸಾಧನೆಯಾ ಬೆಲೆ ಏರಿಕೆ ಭ್ರಷ್ಟಾಚಾರ ಇವರ ಸಾಧನೆಯಾಗಿದೆ. ಯುದ್ದಕ್ಕೆ ಮುನ್ನಾ ಯುದ್ದ ಮಾಡ್ಬೇಡಿ ಎನ್ನೋದು. ಕದನ ವಿರಾಮ ಘೋಷಣೆಯಾದರೆ ಯುದ್ದ ಮಾಡಿ ಅನ್ನೋದು ಇವರ ಧೋರಣೆ, ದೇಶಕ್ಕೆ ಅಗೌರವ ತರುವ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಅಶ್ವಥ್ ನಾರಾಯಣ್ ಗುಡುಗಿದರು.