ನಾಲ್ವರ ಕಚ್ಚಾಟದಿಂದ ಸರ್ಕಾರ ಪತನ:ಅಶೋಕ್‌ ಭವಿಷ್ಯ

ಮೈಸೂರು: ನಾವಾಗಿಯೇ ರಾಜ್ಯ ಸರ್ಕಾರವನ್ನು ಬೀಳಿಸಲು ಹೋಗುವುದಿಲ್ಲ,ಅದರೆ ಅವರೇ ಕಚ್ಚಾಡಿಕೊಂಡು ಸರ್ಕಾರ ಬೀಳುವಂತೆ ಮಾಡುತ್ತಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಭವಿಷ್ಯ ನುಡಿದರು.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ನಾವೇನು ರಾಜಕೀಯ ಸನ್ಯಾಸಿಗಳಲ್ಲ ಹಾಗಂತ ನಾವೇನೂ ಸರ್ಕಾರವನ್ನ ಕೆಡವಲು ಹೋಗೋದಿಲ್ಲ ತಾನಾಗೇ ಬೀಳುತ್ತೆ ಎಂದರು.

ಡಿ.ಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಎಂ ಬಿ ಪಾಟೀಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿಎಂ ಗಾದಿಯ ಆಕಾಂಕ್ಷಿಯಾಗಿದ್ದಾರೆ,ಅವರೇ ಕುರ್ಚಿಗಾಗಿ ಕಚ್ಚಾಡುತ್ತಾರೆ ಎಂದು ಟೀಕಿಸಿದರು.

ಸಿಎಂ ಕುರ್ಚಿಯನ್ನು ಈ ನಾಲ್ವರು ಎಳೆದಾಡುತ್ತಿದ್ದಾರೆ. ಅದರಿಂದಲೇ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ಹೇಳಿದರು.

ಸಿದ್ದರಾಮಯ್ಯ ಆರು ತಿಂಗಳಲ್ಲಿ ಅಧಿಕಾರ ತೊರೆಯುವ ಬಗ್ಗೆ ನೋಟರಿ ಆಫೀಸ್ ನಲ್ಲಿ ಅಗ್ರಿಮೆಂಟ್ ಆಗಿಲ್ಲ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಗ್ರಿಮೆಂಟ್ ಆಗಿದೆ ಎಂದು ಅಶೋಕ್ ವ್ಯಂಗ್ಯವಾಡಿದರು.

ಸಿಎಂ ಕುರ್ಚಿಯನ್ನು ಒದ್ದು ಕಿತ್ತುಕೊಳ್ಳುವುದಾಗಿ ವಿಧಾನಸಭೆ ಅಧಿವೇಶನದಲ್ಲೇ ಹೇಳಿದ್ದಾರೆ.
ಸಿಎಂ ಕುರ್ಚಿ ಭದ್ರವಾಗಿದ್ದರೇ ಈ ರೀತಿ ಯಾಕೆ ಹೇಳುತ್ತಿದ್ದರು ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಡಿಕೆಶಿ ಬಗ್ಗೆ ಪ್ರಶ್ನಿಸಿದರು.

ರಾಜ್ಯದಲ್ಲಿ ರಸ್ತೆಗಳು ಹಾಳಾಗಿವೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ದುಡ್ಡಿಲ್ಲ.ಕಾಂಗ್ರೆಸ್ ನೆಗೆದು ಬಿದ್ದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

ದೇಶ ಈಗ ಒಂದು ಮಹತ್ವದ ಘಟ್ಟಕ್ಕೆ ಹೋಗುತ್ತಿರುವ ಕಾಲವಾಗಿದೆ. ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಮೆಚ್ಚಿದ ಜನರು ಮೂರನೇ ಬಾರಿ ಅಧಿಕಾರ ನೀಡಿದ್ದಾರೆ. ಮನಮೋಹನ್ ಸಿಂಗ್ ಅವರ 10 ವರ್ಷದ ಆಡಳಿತಕ್ಕೆ ಹೋಲಿಸಿದರೆ ನರೇಂದ್ರ ಮೋದಿಯವರ 11 ವರ್ಷದ ಆಡಳಿತದಲ್ಲಿ ದೇಶ ಮೂರ್ನಾಲ್ಕು ಪಟ್ಟು ಅಭಿವೃದ್ಧಿ ಆಗಿದೆ ಎಂದು ‌ಸಮರ್ಥಿಸಿದರು.

ಜಪಾನನ್ನು ಹಿಂದಿಕ್ಕಿ ಭಾರತದ ಆರ್ಥಿಕತೆಯಲ್ಲಿ ವಿಶ್ವದಲ್ಲೇ ನಾಲ್ಕನೇ ಸ್ಥಾನಕ್ಕೆ ಬಂದಿದೆ‌. ಇದಕ್ಕೆ ನರೇಂದ್ರ ಮೋದಿಯವರ ಗಟ್ಟಿ ನಿಲುವು ಕಾರಣವಾಗಿದೆ ಎಂದು ತಿಳಿಸಿದರು.

ನಕ್ಸಲ್ ಚಟುವಟಿಕೆ ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಸಮಾಜದ ವಿವಿಧ ವಲಯಗಳಲ್ಲಿ ಗಮನಾರ್ಹ ಪ್ರಗತಿ ಆಗಿದೆ. ನರೇಂದ್ರ ಮೋದಿಯವರು ಇವತ್ತು ವಿಶ್ವ ನಾಯಕರಾಗಿದ್ದಾರೆ. ವಿಶ್ವದಲ್ಲಿ ಯಾವುದೇ ವಿದ್ಯಮಾನಗಳು ಎದುರಾದಾಗ ಭಾರತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತಿದೆ. ಕಾಶ್ಮೀರ ನಮ್ಮದು ಎಂಬ ಭಾವನೆ ನೆಲೆಯೂರಿದೆ. ಅಲ್ಲಿನ ಜನರು ಪಾಕಿಸ್ತಾನವನ್ನು ವಿರೋಧಿಸುತ್ತಿದ್ದಾರೆ,ದೇಶದ ಅಭಿವೃದ್ಧಿ ಸೇರಿದಂತೆ ಎಲ್ಲದಕ್ಕೂ ನರೇಂದ್ರ ಮೋದಿಯವರ ಜನಮೆಚ್ಚಿದ ಆಡಳಿತ ಕಾರಣ ಎಂದು ಅಶೋಕ್ ಹೇಳಿದರು.