5 ವರ್ಷ ಪೂರ್ತಿ ನಾನೇ ಮುಖ್ಯ ಮಂತ್ರಿ: ಸಿದ್ದರಾಮಯ್ಯ

ನವದೆಹಲಿ: ಐದು ವರ್ಷ ಪೂರ್ತಿ ನಾನೇ ಮುಖ್ಯ ಮಂತ್ರಿಯಾಗಿ ಅಧಿಕಾರದಲ್ಲಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಮಾತುಗಳಲ್ಲಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಸಿಎಂ, 5 ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇರುತ್ತೇನೆ, ಜುಲೈ 2 ರಂದೇ ಈ ಹೇಳಿಕೆಯನ್ನು ಸ್ಪಷ್ಟಪಡಿಸಿದ್ದೇನೆ, ಆ ದಿನ ಡಿ.ಕೆ ಶಿವಕುಮಾರ್ ಕೂಡ ಅಲ್ಲೇ ಇದ್ದರು ಎಂದು ಹೇಳಿದರು.

ಎರಡೂವರೆ ವರ್ಷದ ಬಳಿಕ ಯಾವುದೇ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲ. ನಾನೇ ಮುಖ್ಯಮಂತ್ರಿ ಗಾದಿಯಲ್ಲಿ ಇರುತ್ತೇನೆ ಎಂದು ಪುನರುಚ್ಛರಿಸಿದರು.

ನಮ್ಮದು ಹೈಕಮಾಂಡ್‌ ಅಧಾರಿತ ಪಕ್ಷ. 2023ರ ಸಭೆಯಲ್ಲಿ ಎರಡೂವರೆ ವರ್ಷಗಳ ಅಧಿಕಾರಿ ಹಂಚಿಕೆಯ ಬಗ್ಗೆ ಯಾವುದೇ ಮಾತುಕತೆಯಾಗಿಲ್ಲ. ನಾವು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ಅನುಸರಿಸಬೇಕೆಂದು ಹೈಕಮಾಂಡ್‌ ಹೇಳಿತ್ತು. ಅವರು ಏನೇ ಹೇಳಿದರೂ, ನಾವು ಅದನ್ನು ಅನುಸರಿಸಬೇಕು. ನಾನೂ ಅನುಸರಿಸುತ್ತೇನೆ, ಡಿ.ಕೆ ಶಿವಕುಮಾರ್ ಕೂಡ ಅನುಸರಿಸುತ್ತಾರೆ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಕೂಡ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ. ಅದರಲ್ಲಿ ತಪ್ಪೇನೂ ಇಲ್ಲ. ಆದರೆ, ಕುರ್ಚಿ ಈಗ ಖಾಲಿ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರಲ್ಲವಾ ಟಾಂಗ್ ಕೊಟ್ಟರು.

ನಾಯಕತ್ವಕ್ಕೆ ಸಂಬಂಧಿಸಿದಂತೆ, ಸುರ್ಜೇವಾಲಾ ಅವರು ಯಾವುದೇ ಪ್ರಶ್ನೆಯನ್ನು ಕೇಳಿಲ್ಲ. ಡಿ.ಕೆ ಶಿವಕುಮಾರ್ ಅವರನ್ನು ಬೆಂಬಲಿಸುವ ಕೆಲವು ಶಾಸಕರು ಯಾವಾಗಲೂ ಇರುತ್ತಾರೆ, ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದರು.