ಮೈಸೂರು: ಇಡೀ ದೇಶದ ನಾಗರಿಕರು ಆರೋಗ್ಯವಾಗಿರಬೇಕೆಂಬ ಮುಖ್ಯ ಆಶಯದೊಂದಿಗೆ ಪ್ರಧಾನಿ ಮೋದಿ ಅವರು ಆರಂಭಿಸಿರುವ ‘ಫಿಟ್ ಇಂಡಿಯಾ’ ಆಂದೋಲನಕ್ಕೆ ಮೈಸೂರಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಸಂಸದರ ಕ್ರೀಡೋತ್ಸವ ಅಂಗವಾಗಿ ಮೈಸೂರು ವಿ.ವಿ ದೈಹಿಕ ಶಿಕ್ಷಣ ವಿಭಾಗ, ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್, ಫೋನಿಕ್ಸ್ ಇಂಟರ್ನ್ಯಾಷನಲ್ ಅಕಾಡೆಮಿ, ಸೈಕ್ಲೋಪೀಡಿಯಾ, ಫನ್ ಪ್ಯಾಲೇಸ್, ಸನ್ಪ್ಯೂರ್, ಲಿಟ್ಲ್ ಎಲ್ಲಿ, ಬುಕ್ಸ್ ಅಂಡ್ ಬ್ರೇನ್ಸ್ ಜಂಟಿ ಸಹಯೋಗದಲ್ಲಿ ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ಕಿಡ್ಸ್ ಸೈಕ್ಲೊಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಫಿಟ್ ಇಂಡಿಯಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಆಂದೋಲನವಾಗಿದೆ. ಕಿರಿಯ ವಯಸ್ಸಿನಿಂದಲೇ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂಬ ಪ್ರಧಾನಮಂತ್ರಿಯವರ ಆಶಯದಂತೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ವಿವಿಧ ಕ್ರೀಡೋತ್ಸವ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಕುರಿತು ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಧ್ಯೇಯ. ಕಿರಿಯ ವಯಸ್ಸಿನಿಂದಲೇ ಕ್ರೀಡೆಗೆ ಆದ್ಯತೆ ನೀಡಿದರೆ ಭವಿಷ್ಯದಲ್ಲಿ ನಮ್ಮ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿಯೂ ಪಸರಿಸಬಹುದು,ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಗಾಧ ಅವಕಾಶವಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅವರಿಗೆ ವೇದಿಕೆ ಕಲ್ಪಿಸಲು ಬದ್ಧನಿದ್ದೇನೆ ಎಂದು ಯದುವೀರ್ ತಿಳಿಸಿದರು.

