ಜ.11 ರಿಂದ 18 ರವರೆಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

ಮೈಸೂರು: ಮೈಸೂರು ರಂಗಾಯಣದ ಪ್ರತಿಷ್ಠಿತ ಉತ್ಸವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವು ಜನವರಿ 11 ರಿಂದ 18 ರವರೆಗೆ ನಡೆಯಲಿದೆ ಎಂದು‌ ಅಪರ ಜಿಲ್ಲಾಧಿಕಾರಿ ಡಾ: ಪಿ ಶಿವರಾಜು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ 25 ವರ್ಷದ ಆಚರಣೆಯಾಗಿದ್ದು, ಸಂವಿಧಾನ ಶಿಲ್ಪಿ ಡಾ: ಬಿ.ಆರ್ ಅಂಬೇಡ್ಕರ್ ಅವರ ಚಿಂತನೆಗಳ ಕುರಿತು ನಾಟಕೋತ್ಸವ ನಡೆಯುವುದು ವಿಶೇಷವಾಗಿದೆ ಎಂದು ಹೇಳಿದರು.

ರಂಗಾಯಣದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿ ಹಾಗೂ ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು, ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ನೋಡಲ್ ಅಧಿಕಾರಿಯನ್ನು ನಿಯೋಜಿಸಿ ಎಂದು ಸೂಚಿಸಿದರು.

ನಾಟಕೋತ್ಸವದಲ್ಲಿ ಸಾವಿರಾರು ಜನರು ಭಾಗವಹಿಸುವುದರಿಂದ ಅಗತ್ಯ ಬಂದೋಬಸ್ತ್ , ಉತ್ಸವದಲ್ಲಿ ನೂಕು‌ ನುಗ್ಗಲು‌ ಉಂಟಾಗದಂತೆ ಭದ್ರತೆ, ವಾಹನಗಳ ಸುಗಮ ಸಂಚಾರ, ವಾಹನ ನಿಲುಗಡೆಗೆ ಉತ್ತಮ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಕೆ.ಎಸ್.ಆರ್.ಟಿ.ಸಿ ವತಿಯಿಂದ ನಗರದ ಮುಖ್ಯ ಸ್ಥಳಗಳಿಂದ ಸಂಜೆ 6 ರಿಂದ 10 ಗಂಟೆವರಗೆ ರಂಗಾಯಣಕ್ಕೆ ಬಸ್ ಗಳ ವ್ಯವಸ್ಥೆ ಮಾಡಬೇಕು. ಅಗ್ನಿ ಶಾಮಕ ಇಲಾಖೆ ವತಿಯಿಂದ ಕಾರ್ಯಕ್ರಮಕ್ಕೂ ಮೊದಲೇ ಭೇಟಿ ನೀಡಿ ಮುಂಜಾಗ್ರತಾ ವ್ಯವಸ್ಥೆಯನ್ನು ಪರಿಶೀಲಿಸಿ 24*7 ಅಗ್ನಿ ಶಾಮಕ ವಾಹನವನ್ನು ನಿಯೋಜಿಸುವಂತೆ ಆದೇಶಿಸಿದರು.

ಜನವರಿ 11 ರಿಂದ 18 ರವರೆಗೆ ಬೆಳಗಿನ ಅವಧಿಯಲ್ಲಿ ಮಕ್ಕಳ ಬಹುರೂಪಿ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಪ್ರವಾಸ ಕಾರ್ಯಕ್ರಮವನ್ನು ರಂಗಾಯಣಕ್ಕೆ ಆಯೋಜಿಸಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಮಾಡಿ ಎಂದು ಡಾ.ಪಿ.ಶಿವರಾಜು ಹೇಳಿದರು.

ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಅವರು ಮಾತನಾಡಿ ಡಾ: ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಪ್ರತಿಯೊಬ್ಬರು ಸಮಾನವಾಗಿ ಬದುಕುವ ಅವಕಾಶ ದೊರಕಿದೆ, ಅವರ ಬಗ್ಗೆ ಹಲವಾರು ಸಂಶೋದನೆಗಳು ನಡೆಯುತ್ತಿದೆ. ಅವರಿಗೆ ಗೌರವ ಸಲ್ಲಿಸುವ ಉತ್ತಮ ರೀತಿಯಲ್ಲಿ ಈ ಬಾರಿ ನಾಟಕೋತ್ಸವ ಆಯೋಜಿಸಲಾಗುವುದು. ವಿವಿಧ ಭಾಷೆಗಳ 24 ನಾಟಕ ಹಾಗೂ ಮಕ್ಕಳ 6 ನಾಟಕಗಳು, ವಿಚಾರ ಸಂಕಿರಣ ಸೇರಿದಂತೆ ವಿವಿಧ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ರಂಗಾಯಣದ ಉಪ ನಿರ್ದೇಶಕರಾದ ಡಾ. ಎಂ. ಡಿ ಸುದರ್ಶನ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.