ಮೈಸೂರು: ಕರ್ನಾಟಕ ಸರಕಾರದ ಹಿಜಾಬ್ ಮೇಲಿನ ನಿಷೇಧವನ್ನು ಹಿಂಪಡೆಯುವ ಆದೇಶ ಖಂಡನೀಯ ಇದು ಹಿಜಾಬ್ ಪ್ರೇಮಿ ಸರ್ಕಾರ ಎಂದು ಬಿಜೆಪಿ ಮುಖಂಡರಾದ ಡಾ. ಹೇಮಾನಂದೀಶ್ ಟೀಕಿಸಿದ್ದಾರೆ.
ಶಾಲಾ ಕಾಲೇಜುಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಮಾನತೆಯ ಕೇಂದ್ರಗಳಾಗಿರಬೇಕು, ಶಾಲಾ ಕಾಲೇಜುಗಳ ಪಾವಿತ್ರ್ಯತೆಯನ್ನು ಕಾಪಾಡಬೇಕಾದ ಸರಕಾರವೇ ಮತಾಂಧತೆಯನ್ನು ಶಾಲಾ ಕಾಲೇಜುಗಳ ಒಳಗೆ ತರುತ್ತಿರುವುದು ಅಕ್ಷಮ್ಯ ಅಪರಾಧ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದು ಕೇವಲ ಹಿಜಾಬ್ ಗೆ ನೀಡಿದ ಆದೇಶವಲ್ಲ ಬದಲಿಗೆ ಶಿಸ್ತುಬದ್ಧ ಶಿಕ್ಷಣ ವ್ಯವಸ್ಥೆಯನ್ನು ಅಂತ್ಯಗೊಳಿಸುವುದೇ ಸರಕಾರದ ಉದ್ದೇಶವಾಗಿದೆ. ಇದು ಓಲೈಕೆ ರಾಜಕಾರಣದ ಪರಮಾವಧಿ. ವಿದ್ಯಾರ್ಥಿಗಳ ನಡುವೆ ವಿಷಬೀಜ ಬಿತ್ತುತ್ತಿರುವ ಹಿಜಾಬ್ ಪ್ರೇಮಿ ಕರ್ನಾಟಕ ಸರಕಾರದ ಈ ನಿರ್ಧಾರವನ್ನು ಯುವಜನತೆ ವಿರೋಧಿಸಿ ಬೀದಿಗಿಳಿಯಬೇಕಾಗಿದೆ.
ಈ ತುಘಲಕ್ ಸರಕಾರದ ವಿರುದ್ಧ ಹೋರಾಟ ನಡೆಸುವ ಯುವಶಕ್ತಿಗಳಿಗೆ ಹಿಂದೂ ಪರ ಸಂಘಟನೆಗಳು ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದು ಹೇಮಾ ನಂದೀಶ್ ತಿಳಿಸಿದ್ದಾರೆ.

