ಚಿನ್ನ ಅಡವಿಟ್ಟು ಮೋಸಹೋದವರು ಸಿಸಿಬಿಗೆ ಬನ್ನಿ: ಸೀಮಾ ಲಾಟ್ಕರ್ ಸೂಚನೆ

ಮೈಸೂರು: ಗ್ರಾಹಕರಿಂದ ಚಿನ್ನಾಭರಣ ಪಡೆದು ಕರಗಿಸಿದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರೂ. ವಂಚಿಸಿರುವ ಆರೋಪದ ಮೇಲೆ ಸೌಂದರ್ ರಾಜ್ ಆ ಚಿನ್ನತಂಬಿ ವಿರುದ್ಧ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಕಠಿಣ ಕ್ರಮ ಕೈಗೊಂಡಿದ್ದಾರೆ.

ಈ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿದೆ.

ಸೌಂದರ್ ರಾಜ್ ಅಲಿಯಾಸ್ ಚಿನ್ನತಂಬಿ ವಿವಿಧ ಚಿನ್ನದ ವ್ಯವಹಾರ ಸಂಸ್ಥೆಗಳ ಹೆಸರಿನಲ್ಲಿ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆ ಬಡ್ಡಿ ಹಾಗೂ ಗರಿಷ್ಠ ಬೆಲೆಗೆ ಚಿನ್ನ ಖರೀದಿಸುವುದಾಗಿ ಗ್ರಾಹಕರನ್ನು ನಂಬಿಸಿ, ಚಿನ್ನಾಭರಣಗಳನ್ನು ಖರೀದಿಸಿ, ಗಿರವಿ ಇಟ್ಟುಕೊಂಡು ನಿಗದಿತ ಮೌಲ್ಯ ನೀಡದೇ, ಗ್ರಾಹಕರ ಚಿನ್ನಾಭರಣಗಳನ್ನು ಕರಗಿಸಿ ದುರುಪಯೋಗಪಡಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರಲಾಗಿದೆ.

ಸೌಂದರ್ ರಾಜ್ ಬಳಿ ಚಿನ್ನ ಅಡವಿಟ್ಟು ಅಥವಾ ಮಾರಾಟ ಮಾಡಿ ಮೋಸಹೋಗಿರುವ ಸಾರ್ವಜನಿಕರು ತಕ್ಷಣ ಸಿಸಿಬಿ ಕಚೇರಿ, ಮೈಸೂರು ನಗರದಲ್ಲಿ ಸಹಾಯಕ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಬೇಕು. ಮುಂದಿನ ಕಾನೂನು ಕ್ರಮಕ್ಕಾಗಿ ತಮ್ಮ ಬಳಿ ಲಭ್ಯವಿರುವ ಅಗತ್ಯ ದಾಖಲಾತಿಗಳನ್ನು ಸಲ್ಲಿಸಬೇಕು ಎಂದು ಆಯುಕ್ತೆ ಸೀಮಾ ಲಾಟ್ಕರ್ ತಿಳಿಸಿದ್ದಾರೆ.

ಪೊಲೀಸರ ಕ್ರಮದಿಂದ ವಂಚನೆಗೆ ಒಳಗಾದ ನೂರಾರು ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.