ಮೈಸೂರು: ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜ್ಞಾನ ಮತ್ತು ವಿಜ್ಞಾನದ ಸಮ್ಮಿಲನವಿದೆ ಎಂದು ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬಣ್ಣಿಸಿದರು.
ಯಾವುದನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲವೋ ಅದನ್ನು ಜೀವನದಲ್ಲಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು ಮಾರ್ಮಿಕವಾಗಿ ವಿವರಿಸಿದ್ದಾರೆ ಎಂದು ಶ್ರೀಗಳು ಹೇಳಿದರು.
ಅವರು ಇಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ೮೪ನೇ ಜನ್ಮದಿನೋತ್ಸವದ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಜ್ಞಾನ ಮತ್ತು ವಿಜ್ಞಾನದ ಸಮ್ಮಿಲನ:
ನಮ್ಮ ದೇಶ ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವಂತದ್ದು, ಇವತ್ತು ಜಗತ್ತಿನಲ್ಲಿ ಕಾಣುವ ಎಲ್ಲಾ ಸಂಶೋಧನೆಗಳು ಹಾಗೂ ಆವಿಷ್ಕಾರಗಳನ್ನು ಸಾವಿರ ವರ್ಷಗಳ ಹಿಂದೆ ತಮ್ಮ ದಿವ್ಯ ಜ್ಞಾನದಿಂದ ತಿಳಿದು ಜಗತ್ತಿಗೆ ಅಪೂರ್ವವಾದ ಕೊಡುಗೆಯನ್ನು ಕೊಟ್ಟವರು ಭಾರತೀಯ ಋಷಿಮುನಿಗಳು ಎಂಬುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ಸಂಗತಿ ಎಂದು ತಿಳಿಸಿದರು.
ವೈಜ್ಞಾನಿಕವಾಗಿ ನಾವು ಕಾಣುವ ಮೆಟಾಫಿಸಿಕ್ಸ್ ಇರಬಹುದು ಅಥವಾ ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಬಹುದು, ಎಲ್ಲದರಲ್ಲೂ ಕೂಡ ಹಿಂದೆ ಅವರಿಗೆ ಯಾವುದೇ ಉಪಕರಣಗಳಾಗಲಿ, ಇನ್ಸ್ಟ್ರುಮೆಂಟ್ ಆಗಲಿ, ಮೈಕ್ರೋಸ್ಕೋಪ್ ಆಗಲಿ ಇರಲಿಲ್ಲ. ಆದರೆ ಭಗವಂತನ ಕೃಪೆಯಿಂದ ಮನುಷ್ಯ ತನ್ನನ್ನು ಸಾಧನೆಯಲ್ಲಿ ತೊಡಗಿಸಿಕೊಂಡರೆ, ಆ ಸಾಧನೆಯ ಫಲವಾಗಿ ಜಗತ್ತಿನ ಎಲ್ಲಾ ಸತ್ಯಗಳನ್ನು ಗುರುತಿಸಲು ಸಾಧ್ಯವಿದೆ ಎನ್ನುವುದು ನಮ್ಮ ಭಾರತೀಯ ಧರ್ಮ ಪರಂಪರೆ ಜಗತ್ತಿಗೆ ಕೊಟ್ಟಿರುವ ಅಪೂರ್ವ ಕೊಡುಗೆಯಾಗಿದೆ ಎಂದು ನುಡಿದರು.
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ ಹಾಗೆ, ಜಗತ್ತಿಗೆ ಯಾವ್ಯಾವಾಗ ಅಗತ್ಯವಾಗುತ್ತದೆಯೋ, ಆಗೆಲ್ಲಾ ಮಹಾಪುರುಷರು ಅವತರಿಸುತ್ತಾ ಬರುತ್ತಾರೆ ಎನ್ನುವ ಮಾತು ಜಗತ್ತಿಗೆ ಯಾವತ್ತೂ ಸತ್ಯವಾಗಿ ಉಳಿಯುವಂತದ್ದು ಎಂದು ಶ್ರೀಗಳು ಹೇಳಿದರು.
ಸ್ವಾಮಿ ವಿವೇಕಾನಂದರು ಒಂದು ಮಾತನ್ನು ಹೇಳಿದ್ದರು,”ದೇಶ ಎಲ್ಲಿಯ ವರಗೆ ಸುಭಿಕ್ಷವಾಗಿರುತ್ತದೆ ಎಂದರೆ, ಅದು ಎಲ್ಲಿಯ ತನಕ ಸಾಧು ಸಂತರು ತಮ್ಮ ಅನುಷ್ಠಾನದಿಂದ, ತಪಸ್ಸಿನಿಂದ ಅದೆಲ್ಲಾ ಸಿದ್ಧಿಯನ್ನು ಸಮಾಜಕ್ಕೆ ಧಾರೆ ಎರೆಯುತ್ತಾ ಇರುತ್ತಾರೋ, ಅಲ್ಲಿಯವರೆಗೂ ನಮ್ಮ ದೇಶ ಸುಭಿಕ್ಷವಾಗಿರುತ್ತದೆ ಎಂಬ ಮಾತನ್ನು ಸುತ್ತೂರು ಶ್ರೀಗಳು ಸ್ಮರಿಸಿದರು.
ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳವರು ಗಣಪತಿ ಸಚ್ಚಿದಾನಂದ ಆಶ್ರಮವನ್ನು ಜಗತ್ತಿಗೆ ಲಭ್ಯವಾಗುವಂತೆ ಮಾಡಿದ್ದಾರೆ. ಅದು ಜಗನ್ಮಾನ್ಯವಾಗುವ ಹಾಗೆ ಮಾಡಿದ್ದಾರೆ. ಕರ್ನಾಟಕ, ಆಂಧ್ರ, ತಮಿಳುನಾಡು ಮಾತ್ರವಲ್ಲ, ವಿದೇಶದಲ್ಲಿ ಇರತಕ್ಕಂತವರು ಕೂಡ ಶ್ರೀಗಳ ಬಗ್ಗೆ ಅಪಾರವಾದ ಶ್ರದ್ಧಾಭಕ್ತಿ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.
ಒಮ್ಮೆ ಅಮೆರಿಕದಿಂದ ಬರುವಾಗ ಒಬ್ಬರು ಭೇಟಿಯಾದರು. ಅವರು ಕಾವಿ ಲಾಂಛನ ಧರಿಸಿದ್ದ ನನ್ನನ್ನು ನೋಡಿ ಪರಿಚಯ ಮಾಡಿಕೊಂಡು ಒಂದು ಮಾತು ಹೇಳಿದರು:
“ನಮ್ಮ ತಾಯಿ ಪ್ರತಿ ವರ್ಷ ಅಮೆರಿಕದಿಂದ ಇಂಡಿಯಾಕ್ಕೆ ಬರುತ್ತಾರೆ. ಅದು ಮುಖ್ಯವಲ್ಲ, ಅವರು ಅಮೆರಿಕದ ಮನೆಯಿಂದ ಸೀದಾ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಬರುತ್ತಾರೆ, ಮತ್ತು ಸೀದಾ ಆಶ್ರಮದಿಂದ ಅಮೆರಿಕದ ಮನೆಗೆ ಹೋಗುತ್ತಾರೆ.”
ಅವರಿಗೆ ಭಾರತದಲ್ಲಿ ಬೇರೆ ಯಾವುದೇ ಆಸಕ್ತಿ ಅಥವಾ ಆಕರ್ಷಣೆ ಇರುವುದಿಲ್ಲ. ಆಶ್ರಮವನ್ನೇ ಮನೆಯಾಗಿ ಮಾಡಿಕೊಂಡು, ಶ್ರೀಗಳ ದರ್ಶನಾಶೀರ್ವಾದವನ್ನು ಪಡೆದು, ಮನಸ್ಸಿಗೆ ಸಂತೋಷ ನೆಮ್ಮದಿಯನ್ನು ಪಡೆದುಕೊಂಡು ಹಿಂತಿರುಗುತ್ತಾರೆ ಎಂಬ ಮಾತನ್ನು ತಿಳಿಸಿದ್ದರು.ಆ ಮಟ್ಟಿಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಪ್ರಸಿದ್ದಿಯಾಗಿದ್ದಾರೆ ಎಂದು ನುಡಿದರು.
ಇವತ್ತು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ಬಹಳ ಸಂತೋಷ ತಂದಿದೆ. ವಾಸ್ತವವಾಗಿ ಇವತ್ತು ಬೇರೆ ಕಡೆ ಇರಬೇಕಾಗಿತ್ತು. ಆದರೆ ಆ ಕಾರ್ಯಕ್ರಮವನ್ನ ಮುಂದೂಡಲ್ಪಟ್ಟು ಸ್ವಾಮೀಜಿಯವರ ಅಪೇಕ್ಷೆಯಂತೆ ಇಲ್ಲಿ ಬರಬೇಕಾಯಿತು. ದೈವಕೃಪೆ ಎನ್ನುವುದಕ್ಕೆ ಇದಕ್ಕೇನೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾಗಿಲ್ಲ ಎಂದು ಸುತ್ತೂರು ಸ್ವಾಮೀಜಿ ಬಣ್ಣಿಸಿದರು.
ಇದು ಜನ್ಮದಿನೋತ್ಸವದ ಸಪ್ತಾಹ ಕಾರ್ಯಕ್ರಮ. ಏಳು ದಿವಸಗಳೂ ವಿಶೇಷವಾದ ಕಾರ್ಯಕ್ರಮಗಳಿರುತ್ತವೆ. ಹೋಮ, ವಿಶೇಷ ಪೂಜೆಗಳು, ಸಂಗೀತ ಮತ್ತು ವಿದ್ವಾಂಸರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಅಗತ್ಯವಿರುವವರಿಗೆ ಅಗತ್ಯ ವಸ್ತುಗಳ ವಿತರಣೆ ಹೀಗೆ ಒಂದಲ್ಲ ಹತ್ತು ಹಲವು ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಹಮ್ಮಿಕೊಂಡಿರುವುದು ಸ್ವಾಮೀಜಿಯವರ ಜನ್ಮದಿನೋತ್ಸವದ ಸಂದರ್ಭದಲ್ಲಿ ಎನ್ನುವುದು ಎಲ್ಲರಿಗೂ ಸಂತೋಷವನ್ನುಂಟು ಮಾಡುವ ಸಂಗತಿಯಾಗಿದೆ.
ಪೂಜ್ಯ ಗುರುಗಳಾದ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಗೂ ಪೂಜ್ಯ ಗಣಪತಿ ಸಚ್ಚಿದಾನಂದ ಸ್ವಾಮಿಗಳವರಿಗೂ ಅನನ್ಯವಾದ ಸಂಬಂಧವಿತ್ತು. ಅವರಿಬ್ಬರೂ ಅಂತರಂಗದ ಆಂತರಿಕವಾದ ಬಾಂಧವ್ಯವನ್ನು ಹೊಂದಿದ್ದಂತವರು. ಅಷ್ಟೇ ಆತ್ಮೀಯತೆಯನ್ನು ಹೊಂದಿದ್ದಂತವರು. ಪೂಜ್ಯರು ಈ ದಿನಮಾನದವರೆಗೂ ಪೂಜ್ಯರ ಬಗ್ಗೆ ಇಟ್ಟಿದ್ದ ಅಭಿಮಾನವನ್ನೇ ಇವತ್ತಿಗೂ ಶ್ರೀಮಠದ ಬಗ್ಗೆ ಇಟ್ಟುಕೊಂಡಿದ್ದಾರೆ ಎನ್ನುವುದು ಸಂತೋಷದ ಸಂಗತಿ. ಕಿರಿಯ ಶ್ರೀಗಳವರು ಪೂಜ್ಯರ ಮಗನಂತೆ, ಪಾಲಕರಾಗಿ ಶ್ರೀಗಳು ತೋರಿಸಿದ್ದನ್ನು ಶಿರಸಾವಹಿಸಿ ನೆರವೇರಿಸಿ ಆಶ್ರಮದ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ಸಂತೋಷದ ಸಂಗತಿ ಎಂದು ಶ್ಲಾಘಿಸಿದರು.
ಇದು ಅಧಿಕ ಮಾಸವಾಗಿರುವುದರಿಂದ ಮನುಷ್ಯನಿಗೆ ೧೨೦ ವರ್ಷ ಆಯಸ್ಸು ಅಂತ ಹೇಳುತ್ತಾರೆ. ಆದರೆ ಅಧಿಕ ಮಾಸದಲ್ಲೇ ಹುಟ್ಟಿರುವುದರಿಂದ ಸಾಮಾನ್ಯವಾಗಿ ಹುಟ್ಟುವುದಕ್ಕೂ ಅಧಿಕ ಮಾಸದಲ್ಲಿ ಹುಟ್ಟುವುದಕ್ಕೂ ವಿಶೇಷ ಇರುತ್ತದೆ. ಆದ್ದರಿಂದ ಗುರುಗಳು ಬಹಳ ಕಾಲ ಸಾಮಾನ್ಯವಾಗಿರುವುದಕ್ಕಿಂತ ಹೆಚ್ಚುವರಿ ವರ್ಷ ನಮ್ಮೊಡನೆ ಇರಲಿ, ಭಗವಂತ ಅವರಿಗೆ ಆಯುರಾರೋಗ್ಯವನ್ನು ಕೊಡಲಿ ಎಂದು ಸುತ್ತೂರು ಶಿವರಾತ್ರೀಶ್ವರ ಸವಾಮೀಜಿ ಪ್ರಾರ್ಥಿಸಿದರು.
ಕೃತಿಗಳ ಬಿಡುಗಡೆ:
ಇದೇ ಸಂದರ್ಭದಲ್ಲಿ ಎರಡು ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಒಂದು ಅಶ್ವತ್ಥನಾರಾಯಣ ಅವರ ‘ದತ್ತಾವತಾರಿ ಮುಕ್ತಕ ಪಿಯೂಷ’ ಎನ್ನುವಂತದ್ದು ಮತ್ತು ಸ್ವಾಮೀಜಿಯವರ ಸೀಕ್ರೆಟ್ ಫಾರ್ ಸಕ್ಸಸ್ ಇಂಗ್ಲಿಷ್ ಪುಸ್ತಕದ ತಮಿಳು ಅನುವಾದ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಆಶ್ರಮದ ಕಿರಿಯ ಶ್ರೀ ಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.

