ಚಾಮುಂಡೇಶ್ವರಿ ದರ್ಶನಕ್ಕೆ 2,000 ರೂ: ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ಆಷಾಢ ಮಾಸದಲ್ಲಿ ‌ತಾಯಿ ಚಾಮುಂಡಿ‌ ದರ್ಶನಕ್ಕೆ 2,000 ರೂ.ಟಿಕೆಟ್‌ ದರ‌‌ ಏರಿಸಿರುವುದನ್ನು‌ ಖಂಡಿಸಿ ಕರ್ನಾಟಕ ಸೇನಾ ಪಡೆಯವರು‌ ಪ್ರತಿಭಟನೆ ನಡೆಸಿದರು.

2000 ರೂ ಇದ್ದರೆ ಆಷಾಡ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಬನ್ನಿ. ಇಲ್ಲವಾದರೆ ಮನೆಯಿಂದಲೇ ತಾಯಿಗೆ ಕೈ ಮುಗಿದು ಬಿಡಿ. ಎಂದು ಕರ್ನಾಟಕ ಸೇನಾ ಪಡೆಯ ಸದಸ್ಯರು ಚಾಮುಂಡಿ ಬೆಟ್ಟ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹಳೇ ಜಿಲ್ಲಾಧಿಕಾರಿಗಳ ಮುಂಭಾಗ ದಿಕ್ಕಾರ ಕೂಗಿ ಪ್ರತಿಭಟಿಸಿದರು.

ಉಳ್ಳ ಭಕ್ತಾದಿಗಳ ಭಕ್ತ ಪರಾಕಾಷ್ಟೆಯ ಹೆಸರಲ್ಲಿ, ವಿಶೇಷ ದರ್ಶನದ ಹೆಸರಲ್ಲಿ, ರಾಜ್ಯ ಸರ್ಕಾರ 2೦೦೦ ರೂಪಾಯಿಯನ್ನು ಲೂಟಿ ಮಾಡಲು ಹೊರಟಿದೆ. ವಿಶೇಷ ದರ್ಶನದಿಂದಾಗಿ ಸರ್ಕಾರ ಉಳಿದ ಭಕ್ತಾದಿಗಳನ್ನು ಕಡೆಗಣಿಸುತ್ತಿದೆ ಎಂದು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ ಗೌಡ ಆರೋಪಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ, ಬಿಟ್ಟಿ ಭಾಗ್ಯಗಳನ್ನು ಘೋಷಿಸಿ, ಅವುಗಳಿಗೆ ಹಣ ಹೊಂದಿಸಲು ಸಾಧ್ಯವಾಗದೆ, ದಿವಾಳಿಯಾಗಿ ಈಗ ಈ ರೀತಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ಕಣ್ಣು ಹಾಕಿ, ಭಕ್ತರಿಂದ ಹಣ ವಸೂಲಿ ಮಾಡಲು ಹೊರಟಿರುವುದು ಅತ್ಯಂತ ಖಂಡನೀಯ ಎಂದು ಹೇಳಿದರು.

ಜೊತೆಗೆ ಈ ವರ್ಷದಿಂದ ಚಾಮುಂಡಿ ಬೆಟ್ಟ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ದರ್ಶನದ 50 ರೂ ಹಾಗೂ 300 ರೂಗಳ ವಿಶೇಷ ದರ್ಶನಗಳ ಟಿಕೆಟ್ ಗಳನ್ನು ರದ್ದು ಮಾಡುತ್ತಿರುವುದು ಬೇಸರದ ಸಂಗತಿ ಆಗಿದೆ.

ಜಗತ್ಪ್ರಸಿದ್ಧ ಚಾಮುಂಡೇಶ್ವರಿ ಬೆಟ್ಟ ಮೈಸೂರು ಮಹಾರಾಜರ ಕೊಡುಗೆ ಹಾಗೂ ಆಸ್ತಿ. ಇದನ್ನು ಮಹಾರಾಜರು ಸ್ಥಾಪಿಸಿದ್ದು ಭಕ್ತಾದಿಗಳಿಗೆ ದೇವಿಯ ದರ್ಶನ ಉಚಿತವಾಗಿ ಸಿಗಲೆಂದು. ಆದರೆ ಈಗ ರಾಜ್ಯ ಸರ್ಕಾರ 2000 ರೂಪಾಯಿಗಳ ಟಿಕೆಟ್ ನೆಪದಲ್ಲಿ, ಬೆಟ್ಟದಲ್ಲಿ ವ್ಯಾಪಾರೀಕರಣ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಹೇಳಿದರು.

ಚಾಮುಂಡಿ ಬೆಟ್ಟ ಪ್ರಾಧಿಕಾರ ಹೇಳುವುದು 2000 ರೂ.ಗೆ ನಾವು ಕಿಟ್ ನೀಡುತ್ತೇವೆ ಎಂದು. ಆಷಾಢದಲ್ಲಿ ಜನರು ದೇವಿಯ ದರ್ಶನ ಮಾಡಲು ಬರುತ್ತಾರೆ ವಿನಃ ಯಾವುದೇ ಕಿಟ್ ಜನರಿಗೆ ಬೇಕಿಲ್ಲ. ಚಾಮುಂಡಿ ಬೆಟ್ಟ ಪ್ರಾಧಿಕಾರ ಮೊದಲು 2000 ರೂ ಟಿಕೆಟ್ ಪಡೆದು ಆಗಮಿಸುವ ಸುಮಾರು 100 ಭಕ್ತಾದಿಗಳಿಗೆ ಕಿಟ್ ನೀಡಿ, ಫೋಟೋ, ವಿಡಿಯೋ ತೆಗೆದುಕೊಂಡು, ನಂತರ ಒಬ್ಬರಿಗೂ ನೀಡುವುದಿಲ್ಲ. ಸಾವಿರಾರು ಕಿಟ್ ಗಳ ಲೆಕ್ಕ ನೀಡುತ್ತಾರೆ. ಇದರಿಂದ ಜನರ ಹಣ, ಬೆಟ್ಟದ ಅಧಿಕಾರಿಗಳಿಂದ ದುರುಪಯೋಗವಾಗುತ್ತದೆ. 2000 ರೂ ಟಿಕೆಟ್ ವಿಚಾರವಾಗಿ ಸ್ವತಹ ಮೈಸೂರು ಮಹಾರಾಜ ಹಾಗು ಸಂಸದರಾಗಿರುವ ಯದುವೀರ್ ಒಡೆಯರ್ ಹಾಗೂ ಮಹಾರಾಣಿ ಪ್ರಮೋದಾದೇವಿಯವರು ಸಹ ಇದು ಬೇಡ ಎಂದು ಖಂಡಿಸಿದ್ದಾರೆ. ಇದರ ಬದಲು ಕಳೆದ ವರ್ಷಗಳಂತೆ 50 ರೂ ಹಾಗೂ 300 ರೂ ದರ್ಶನದ ವ್ಯವಸ್ಥೆಯನ್ನು ಬೆಟ್ಟದ ಪ್ರಾಧಿಕಾರ ಮುಂದುವರಿಸಬೇಕೆಂದು ಆಗಹಿಸಿದರು.

ಜೊತೆಗೆ ಉಸ್ತುವಾರಿ ಸಚಿವರು ಮೊನ್ನೆ ಪ್ರೆಸ್ ಮೀಟ್ ನಲ್ಲಿ ಮೆಟ್ಟಿಲು ಹತ್ತಿ ಬರುವ ಭಕ್ತಾದಿಗಳಿಗೆ ಬಿಸ್ಕೆಟ್, ಕುಡಿಯುವ ನೀರು, ಹಾಲುಮಜ್ಜಿಗೆ ನೀಡುತ್ತೇವೆ ಎಂದು ಹೇಳಿರುವುದು ಸುಳ್ಳು ಭರವಸೆಯಾಗಿದೆ. ಇದ್ಯಾವುದೂ ಅಂದಿನ ದಿನ ಕಾರ್ಯಗತಕ್ಕೆ ಬರುವುದೇ ಇಲ್ಲ. ಈ ಹೆಸರಿನಲ್ಲಿ ಬೆಟ್ಟದ ಪ್ರಾಧಿಕಾರ,ಸರ್ಕಾರ ಹಣ ಲೂಟಿ ಮಾಡುವ ಸಂಚು. ಇದರ ಬದಲಾಗಿ ಮೆಟ್ಟಿಲು ಹತ್ತಿ ದಣಿದು ಬರುವ ಭಕ್ತಾದಿಗಳಿಗೆ ನೇರದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಿ ಹಾಗೂ ಜೊತೆಗೆ ಮೆಟ್ಟಿಲು ಹತ್ತಿ ಬರುವ ಭಕ್ತಾದಿಗಳಿಗೆ ಸಮರ್ಪಕ ಶೌಚಾಲಯದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲೇಬೇಕು ಎಂದು ಕರ್ನಾಟಕ ಸೇನಾ ಪಡೆಯ ಸದಸ್ಯರು ‌ಆಗ್ರಹಿಸಿದರು.

ಕೂಡಲೇ 2,000 ರೂ ನ ವಿಶೇಷ ದರ್ಶನವನ್ನು ರದ್ದು ಮಾಡಬೇಕು ಎಂದು ಭಕ್ತಾದಿಗಳ ಪರವಾಗಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು. ಗೋಲ್ಡನ್ ಸುರೇಶ್, ಪ್ರಭುಶಂಕರ್, ಕೃಷ್ಣಪ್ಪ, ಪ್ರಜೀಶ್, ಸಿಂದುವಳ್ಳಿ ಶಿವಕುಮಾರ್, ಗಿರೀಶ್, ಬೋಗಾದಿ ಸಿದ್ದೇಗೌಡ, ಮಧುವನ ಚಂದ್ರು, ಸೋಮೇಗೌಡ, ಶಿವಲಿಂಗಯ್ಯ, ಹೊನ್ನೇಗೌಡ, ಮಂಜುಳಾ, ಶೋಭಾ ರಾಣಿಗೌಡ, ವಿಜಯೇಂದ್ರ, ನಾಗೇಂದ್ರ, ಕೃಷ್ಣೇಗೌಡ, ಶ್ರೀನಿವಾಸ , ಸುಜಾತಾ, ಜ್ಯೋತಿ, ತಾಯೂರು ಗಣೇಶ್, ಹನುಮಂತಯ್ಯ, ಗೀತಾ ಗೌಡ , ಬಸವರಾಜು, ಪದ್ಮ, ತ್ಯಾಗರಾಜ್, ಎಳನೀರು ರಾಮಣ್ಣ,ದರ್ಶನ ಗೌಡ, ಪ್ರದೀಪ್, ಕುಮಾರ್, ನಾರಾಯಣ ಗೌಡ, ಶಿವರಾಂ , ವಿಘ್ನೇಶ್, ಹನುಮಂತೇಗೌಡ , ಚಂದ್ರಶೇಖರ್, ಪರಿಸರ ಚಂದ್ರು, ಗಣೇಶ್ ಪ್ರಸಾದ್, ವಿಷ್ಣು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.