ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ: ಉನ್ನತ ಮಟ್ಟದ ತನಿಖೆ ಅಗತ್ಯ -ಡಿ.ಕೆ.ಶಿ

ಕಾರವಾರ: ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಕುರಿತು ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಶನಿವಾರ ಡಿಕೆಶಿ ಕಾರವಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಸಂತೋಷ್ ಅವರ ಆತ್ಮಹತ್ಯೆ ಯತ್ನ ಪ್ರಕರಣ ಗಂಭೀರವಾದ ವಿಚಾರ. ಸಂತೋಷ ಅವರನ್ನು ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರೊಬ್ಬರು ಬ್ಲಾಕ್ ಮೇಲ್ ಮಾಡುತ್ತಿದ್ದರು ಎಂಬ ಸುದ್ದಿ 2 ತಿಂಗಳಿಂದ ಹರಿದಾಡಿತ್ತು. ಇದರಲ್ಲಿ ಸಾಕಷ್ಟು ಗೌಪ್ಯ ಅಡಗಿವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಸಂತೋಷ್ ಆತ್ಮಹತ್ಯೆ ಯತ್ನ ವಿಚಾರ ನನಗೆ ಗೊತ್ತಿದೆ. ಅವರ ಯಾವುದೋ ಒಂದು ವಿಡಿಯೋವನ್ನು ಬಳಸಿ ಒಬ್ಬ ಸಚಿವ ಹಾಗೂ ಎಂಎಲ್ ಸಿ ಬೆದರಿಕೆ ಹಾಕುತ್ತಿದ್ದರು. ಆ ವಿಡಿಯೋವನ್ನು ದೆಹಲಿ ನಾಯಕರಿಗೂ ಕೊಟ್ಟಿದ್ದಾರೆ ಎಂಬ ಮಾಹಿತಿ ತಿಳಿದಿತ್ತು. ಈ ಬಗ್ಗೆ ಅವರಿಗೆ ಬೇಸರವಾಗಿದೆ ಅಂತಾ ತಿಳಿದುಬಂದಿದೆ. ಈ ವಿಡಿಯೋ ಯಾರು ಕೊಟ್ಟಿದ್ದಾರೆ ಎಂಬುದು ಉನ್ನತ ಮಟ್ಟದ ತನಿಖೆ ಮೂಲಕ ಬಹಿರಂಗವಾಗಲಿ ಎಂದು ಡಿಕೆಶಿ ಹೇಳಿದರು.
ಸಂತೋಷ್ ಅವರಿಗೆ ಬೆದರಿಸಿರಬಹುದು. ಸಿಎಂ ಅವರನ್ನು ಬೆದರಿಸಿರುವ ಸಾಧ್ಯತೆಗಳು ಇವೆ. ಆ ಎಂಎಲ್ ಸಿ ಹಾಗೂ ಸಚಿವರು ಇಬ್ಬರು ಬೆದರಿಸುತ್ತಿದ್ದರು ಎಂಬ ಮಾಹಿತಿ ಇತ್ತು. ಹೀಗಾಗಿ ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಪ್ರಕರಣ ಸರ್ಕಾರ ತನಿಖೆ ಅರ್ಥವಿಲ್ಲ. ಉನ್ನತ ಮಟ್ಟದ ತನಿಖೆ ಅಗತ್ಯವಿದೆ ಎಂದರು.