ಕೋವಿಡ್ ಲಸಿಕೆ ಪಾಲಿಟಿಕ್ಸ್; ಇದು ಕೆಲವರಿಗೆ ಅಂಟಿರುವ ಜಾಡ್ಯ -ಡಿಸಿಎಂ

ಬೆಂಗಳೂರು: ಕೋವಿಡ್-19 ಲಸಿಕೆ ನೀಡುವ ವಿಚಾರದಲ್ಲಿ ಯಾರು ರಾಜಕಾರಣ ಮಾಡಬಾರದು ಎಂದು ಮನವಿ ಮಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಈ ವಿಷಯದಲ್ಲಿ ಪ್ರತಿಪಕ್ಷಗಳು ಸರಕಾರಕ್ಕೆ ರಚನಾತ್ಮಕ- ಮೌಲಿಯುತ ಸಲಹೆ ನೀಡಬೇಕು ಎಂದು ಕೋರಿದರು.
ಬೆಂಗಳೂರಿನಲ್ಲಿ ಭಾನುವಾರ ಚಿತ್ರಸಂತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಡಿಸಿಎಂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಪ್ರತಿಯೊಂದರಲ್ಲಿಯೂ ರಾಜಕೀಯ ಹುಡುಕುವುದು ಕೆಲವರಿಗೆ ಅಂಟಿರುವ ಜಾಡ್ಯ. ಅದಕ್ಕೇನು ಮಾಡಲು ಸಾಧ್ಯ? ಸಹಕಾರ ಕೊಡಿ ಎಂದಷ್ಟೇ ಸರಕಾರ ಮನವಿ ಮಾಡಲು ಸಾಧ್ಯವಷ್ಟೇ ಎಂದರು.
ದೇಶದಲ್ಲಿ ಕೋವಿಡ್ ಲಸಿಕೆ ನೀಡಲು ಭಾರತ್ ಬಯೋಟೆಕ್‍ಗೆ ಕೇಂದ್ರ ಸರಕಾರ ಅನುಮತಿ ನೀಡಿರುವುದು ಸ್ವಾಗತಾರ್ಹ. ಮೊದಲ ಹಂತದಲ್ಲಿ ಕೋವಿಡ್ ವಾರಿಯರ್ಸ್‍ಗೆ ಹಾಗೂ ಈ ಮಾರಿಯ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವವರಿಗೆ ಲಸಿಕೆ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಭಾರತ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿದ್ದು, ವ್ಯಾಕ್ಸಿನ್ ನೀಡಲು ಎಷ್ಟು ಕಂಪನಿಗಳು ಮುಂದೆ ಬಂದರೂ ಸಾಕಾಗುವುದಿಲ್ಲ. ಹೀಗಾಗಿ ಭಾರತ್ ಬಯೋಟೆಕ್‍ಗೆ ಅನುಮತಿ ನೀಡಿರುವ ಕ್ರಮ ಉತ್ತಮ ಹೆಜ್ಜೆ ಎಂದರು ಡಿಸಿಎಂ.
ತ್ವರಿತವಾಗಿ ಎಲ್ಲರಿಗೂ ಲಸಿಕೆ ಸಿಗಬೇಕು. ಈ ನಿಟ್ಟಿನಲ್ಲಿ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡು ಭರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದ್ಯತೆಯ ಅನುಸಾರವಾಗಿ ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಕೆಲಸ ಆಗುತ್ತದೆ ಎಂದರು.