ನವದೆಹಲಿ: ಕ್ರೈಸ್ತ, ಇಸ್ಲಾಮ್ ಗಳಿಗೆ ಮತಾಂತರವಾಗುವ ದಲಿತರು ಮೀಸಲು ಕ್ಷೇತ್ರಗಳಲ್ಲಿ ವಿಧಾನಸಭೆ, ಲೋಕಸಭೆ ಚುನಾವಣೆಗಳಿಗೆ ಸ್ಪರ್ಧಿಸುವಂತಿಲ್ಲ ಹಾಗೂ ಅಂತಹ ದಲಿತರಿಗೆ ಮೀಸಲಾತಿಯಡಿಯಲ್ಲಿ ಇರುವ ಯಾವ ಸೌಲಭ್ಯವೂ ಸಿಗುವುದಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು.
ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಅವರ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಹಿಂದೂ, ಸಿಖ್, ಬೌದ್ಧ ಮತಗಳನ್ನು ಅನುಸರಿಸುವ ದಲಿತರನ್ನು ಹೊರತುಪಡಿಸಿ, ಕ್ರೈಸ್ತ, ಮುಸಲ್ಮಾನರಾಗಿ ಮತಾಂತರ ಹೊಂದುವ ದಲಿತರಿಗೆ ಮೀಸಲಾತಿಯ ಯಾವ ಸೌಲಭ್ಯವೂ ಸಿಗುವುದಿಲ್ಲ ಎಂದು ತಿಳಿಸಿದರು.
ಸಂವಿಧಾನದ ಪ್ಯಾರಾ 3 ರನ್ನು (ಪರಿಶಿಷ್ಟ ಜಾತಿಗಳು) ಉಲ್ಲೇಖಿಸಿರುವ ಸಚಿವರು, ದಲಿತರು ಹಿಂದೂ, ಸಿಖ್, ಬೌದ್ಧ ಧರ್ಮಗಳನ್ನು ಅನುಸರಿಸಿದರೆ ಅವರನ್ನು ಪರಿಶಿಷ್ಟ ಜಾತಿಯ ಸದಸ್ಯರೆಂದೇ ಗುರುತಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಈ ಕಾನೂನನ್ನು ಬದಲಾವಣೆ ಮಾಡುವ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ, ಯಥಾಸ್ಥಿತಿ ಮುಂದುವರೆಯಲಿದೆ ಎಂದು ಸಚಿವರು ಸದನದಲ್ಲಿ ತಿಳಿಸಿದರು.
ಕ್ರೈಸ್ತ, ಇಸ್ಲಾಮ್ ಗೆ ಮತಾಂತರವಾಗುವ ದಲಿತರಿಗೆ ಮೀಸಲಾತಿ ಸೌಲಭ್ಯ ಸಿಗುವುದಿಲ್ಲ -ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

