ಬೆಂಗಳೂರು: ಹಿಂದೂ ದೇವಾಲಯಗಳನ್ನು ಬಿಜೆಪಿಯವರೇ ನಾಶ ಮಾಡೋದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಿದ್ದರಾಮಯ್ಯನವರು ವಿಧಾನ ಸಭೆಯಲ್ಲಿ ಬುಧವಾರ ಮಾತನಾಡಿ, ಬಿಜೆಪಿಯವರು ಮಾತಾನಾಡಿದರೆ ರಾಮನ ಜಪ, ರಾಮ ಮಂದಿರ ಕಟ್ಟುತ್ತೇವೆ ಅಂತ ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆಂದರು.
ಸರ್ಕಾರದ ಗಮನಕ್ಕೆ ತರದೇ ಮುಖ್ಯಕಾರ್ಯದರ್ಶಿಗಳು ದೇವಸ್ಥಾನ ತೆರವುಗೊಳಿಸುವ ಕುರಿತು ಪತ್ರ ಬರೆಯಲು ಸಾಧ್ಯವಿಲ್ಲ. 15ನೇ ತಾರೀಖಿನಿಂದ ಜಿಲ್ಲಾಧಿಕಾರಿಗಳು ಹಾಗೂ ತಹಶಿಲ್ದಾರರು ಸುಪ್ರೀಂ ಕೋರ್ಟ್ನ ತೀರ್ಮಾನದಂತೆ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಧಾರ್ಮಿಕ ಕಟ್ಟಡಗಳನ್ನು ನೆಲಸಮ ಮಾಡುತ್ತಿದ್ದಾರೆಂದರು.
ಇದಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾದ ಮೇಲೆ ತಮ್ಮ ಮಾನ ಉಳಿಸಿಕೊಳ್ಳಲು ಸರ್ಕಾರ ಬಣ್ಣ ಬದಲಾಯಿಸಿದೆ. ಈಗ ಅವರಿಗೆ ಒಡೆಯಬೇಡಿ ಎಂಬ ಸೂಚನೆ ಕೊಡ್ತೀವಿ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಸರ್ಕಾರದ ಗಮನಕ್ಕೆ ಬಾರದೆ ದೇವಾಲಯ ಒಡೆದಿದ್ದಾರ? ಮೈಸೂರು ಸಂಸದರು ಈಗ ದೇವಾಲಯ ಒಡೆದು ಆದ ಮೇಲೆ ಮಾತಾಡ್ತಾರೆ. ಇದರ ಬದಲು ಸರ್ಕಾರದ ಗಮನಕ್ಕೆ ತಂದು ದೇವಸ್ಥಾನ ಒಡೆಯುವುದನ್ನು ತಡೆಯಬೇಕಿತ್ತು ಎಂದು ಸಿದ್ದು ಹೇಳಿದರು.
ಭಕ್ತರ ಗಮನಕ್ಕೆ ತಂದು ಪರ್ಯಾಯ ವ್ಯವಸ್ಥೆ ಮಾಡಿ ಆಮೇಲೆ ದೇವಸ್ಥಾನ ಕೆಡವಬಹುದಿತ್ತು. ಏಕಾಏಕಿ ದೇವಸ್ಥಾನ ದ್ವಂಸ ಮಾಡಿರುವುದು ಬಿಜೆಪಿಯವರ ಢೋಂಗಿತನವನ್ನು ತೋರಿಸುತ್ತದೆ. ಹಿಂದುತ್ವವಾದ ಎನ್ನೋದು ಕೇವಲ ರಾಜಕಾರಣಕ್ಕಾಗಿ, ಓಟಿಗಾಗಿ ಮಾತ್ರ, ಅಸಲಿಗೆ ಬಿಜೆಪಿಯವರಿಗೆ ಹಿಂದೂ ಧರ್ಮದ ಬಗ್ಗೆ ಗೌರವವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆಂದರು.
ಸುಪ್ರೀಂ ಕೋರ್ಟ್ ನಿರ್ಣಯ ಬಂದಿದ್ದು ಇವತ್ತು ನಿನ್ನೆಯದಲ್ಲ. ಸರ್ಕಾರ ಇಷ್ಟು ದಿನ ಏನು ಮಾಡ್ತಾ ಇತ್ತು? ಬಿಜೆಪಿ ಸರ್ಕಾರ ಬಂದು ಎರಡೂವರೆ ವರ್ಷ ಆಯ್ತು, ಈಗ ಯಾಕೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವ ನಾಟಕ? ಇದು ಢೋಂಗಿತನವಲ್ಲದೆ ಇನ್ನೇನು? ನಾವು ಬಿಜೆಪಿಯವರಂತೆ ರಾಜಕೀಯಕ್ಕಾಗಿ ಧರ್ಮ, ದೇವರನ್ನು ಬಳಸಿಕೊಳ್ಳಲ್ಲ.
ನಾವು ಯಾವ ಆಪರೇಷನ್ ಮಾಡಲ್ಲ, ಯಾರನ್ನೂ ಬಲವಂತವಾಗಿ ಪಕ್ಷಕ್ಕೆ ಕರೆತರಲ್ಲ. ನಮ್ಮ ಪಕ್ಷದ ಸಿದ್ದಾಂತ ಒಪ್ಪಿ, ಪಕ್ಷಕ್ಕೆ ಬದ್ಧರಾಗಿ ಇರುತ್ತೇನೆಂದು ಬರುವವರಿಗೆ ಪಕ್ಷದಲ್ಲಿ ಅವಕಾಶ ಇದೆ ಎಮದು ಸಿದ್ದರಾಮಯ್ಯ ಹೇಳಿದರು.

