ಹುಬ್ಬಳ್ಳಿ: ಹಾನಗಲ್, ಸಿಂದಗಿ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಎಂ ಅವರು ಮಾತನಾಡಿದರು.
ಬಿಜೆಪಿ ಪರವಾದ ಅಲೆ ಇದೆ. ಎರಡೂ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ಹೆಚ್ಚಿನ ಸಮಯ ಕೊಟ್ಟು ಪ್ರಚಾರ ಮಾಡುತ್ತೇನೆ ಎಂದು ಸಿಎಂ ಹೇಳಿದರು.
ಹಾನಗಲ್ ಉಪ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದೇನೆ. ನಮ್ಮ ಅಭ್ಯರ್ಥಿಗಳು ಅತೀ ಹೆಚ್ಚು ಮತಗಳಿಂದ ಜಯಭೇರಿ ಬಾರಿಸುತ್ತಾರೆ ಎಂದರು.
ಸಂಗೂರು ಶುಗರ್ ಫ್ಯಾಕ್ಟರಿಗೆ ತನ್ನದೇ ಇತಿಹಾಸ ಇದೆ. ಅದನ್ನು ಮುಚ್ಚುವುದರಲ್ಲಿ ಕಾಂಗ್ರೆಸ್ ಕೊಡುಗೆ ಬಹಳ ಇದೆ. ಬಿಜೆಪಿ ಸರ್ಕಾರ ಬಂದ ಮೇಲೆ ಕಾರ್ಖಾನೆ ಆರಂಭಿಸಿ ಕಬ್ಬು ನುರಿಸುವ ಹಂತಕ್ಕೆ ತಂದಿದ್ದೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ತೈಲ ಬೆಲೆ ವಿಚಾರವಾಗಿ ಮಾತನಾಡಿದ ಸಿಎಂ ಅವರು, ಆರ್ಥಿಕತೆಯ ಮೇಲೆ ತೈಲ ಬೆಲೆ ನೇರ ಪರಿಣಾಮ ಬೀರುತ್ತದೆ. ರಾಜ್ಯದ ಆರ್ಥಿಕತೆ ಸುಧಾರಣೆ ಕಂಡರೆ ಉಪ ಚುನಾವಣೆ ಬಳಿಕ ತೈಲ ಬೆಲೆ ಇಳಿಕೆಯ ಬಗ್ಗೆ ಚಿಂತನೆ ಮಾಡಲಾಗುವುದೆಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

