ಕುಮಾರಸ್ವಾಮಿಯವರು ಬಹಳ ಮಂದಿ ಮುಸ್ಲಿಂ ಜನರನ್ನ ಬಲಿ ತೆಗೆದುಕೊಂಡಿದ್ದಾರೆ -ಮಾಜಿ ಸಚಿವ ಜಮೀರ್ ಅಹ್ಮದ್

ಹುಬ್ಬಳ್ಳಿ: ಕುಮಾರಸ್ವಾಮಿಯವರು ಬಹಳ ಮಂದಿ ಮುಸ್ಲಿಂ ಜನರನ್ನ ಬಲಿ ತೆಗೆದುಕೊಂಡಿದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಗಂಭೀರ ಆರೋಪ ಮಾಡಿದ್ದಾರೆ.

ಜಮೀರ್ ಅಹಮದ್ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕುಮಾರಸ್ವಾಮಿಯವರ ಟಾರ್ಗೆಟ್ ಕೇವಲ ಅಲ್ಪಸಂಖ್ಯಾತರು ಎಂದು ಅವರು ಹೇಳಿದರು.

ತನ್ವೀರ್ ಶೇಠ್‍ರನ್ನ ಸೋಲಿಸಿದ್ದೇ ಕುಮಾರಸ್ವಾಮಿ ಎಂದ ಅವರು, ಅಲ್ಪಸಂಖ್ಯಾತರನ್ನ ಮುಗಿಸಿದ್ದು ಸಿದ್ದರಾಮಯ್ಯ ಅಲ್ಲ ಕುಮಾರಸ್ವಾಮಿ ಎಂದು ತಿಳಿಸಿದರು.

ಕುಮಾರಸ್ವಾಮಿ ಉಪಚುನಾವಣೆಯಲ್ಲಿ ಸೂಟ್‍ಕೇಸ್ ರಾಜಕಾರಣ ಮಾಡಿ ಅಲ್ಪಸಂಖ್ಯಾತರನ್ನ ಬಲಿ ತೆಗೆದುಕೊಂಡಿದ್ದಾರೆ. ಹಾನಗಲ್‍ನಲ್ಲಿ ಸೂಟ್‍ಕೇಸ್ ಬರದ ಕಾರಣ ಒಂದೇ ದಿನ ಪ್ರಚಾರ ಮಾಡಿದ್ದಾರೆ ಎಂದು ಜಮೀರ್ ಅಹಮದ್ ದೂರಿದರು.

ಸೂಟ್‍ಕೇಸ್ ಪದ್ದತಿಯ ಬಗ್ಗೆ ನಾನು ಹೇಳ್ತಿಲ್ಲ. ದೇವೇಗೌಡರ ಮೊಮ್ಮಗ ಸಂಸದ ಪ್ರಜ್ವಲ್ ಹೇಳಿದ್ದಾರೆಂದರು.

ನಾನು ಹಾನಗಲ್ ಉಪಚುನಾವಣೆಯ ಪ್ರಚಾರಕ್ಕಾಗಿ ಬಂದಿದ್ದೇನೆ. ಸಿಂಧಗಿಯಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಹಾನಗಲ್‍ನಲ್ಲಿ ಶ್ರೀನಿವಾಸ ಮಾನೆ ಒಳ್ಳೆಯ ಕೆಲಸ ಮಾಡಿದ್ದಾರೆ. ಶ್ರೀನಿವಾಸ ಮಾನೆ ಯಾರೂ ಮಾಡದ ಕೆಲಸ ಮಾಡಿದ್ದಾರೆ, ಅವರು ಜಯ ನಿಶ್ಚಿತ ಎಂದರು.

ಸಿಎಂ ಉದಾಸಿ ರೈಟ್ ಪರ್ಸನ್, ಇನ್ ರಾಂಗ್ ಪಾರ್ಟಿಯಲ್ಲಿದ್ದರು. ಬಿಜೆಪಿಯಿಂದ ಅವರ ಕುಟುಂಬಕ್ಕೆ ಟಿಕೇಟ್ ಕೊಡಬೇಕಾಗಿತ್ತು. ಉದಾಸಿ ಕುಟುಂಬಕ್ಕೆ ಟಿಕೇಟ್ ನೀಡದ ಕಾರಣಕ್ಕೆ ಅವರು ಸೋತು ಬಿಟ್ಟಿದ್ದಾರೆಂದು ಅವರು ಹೇಳಿದರು.

ಈ ಎರಡೂ ಉಪಚುನಾವಣೆಯಲ್ಲಿ ಜೆಡಿಎಸ್ ಲೆಕ್ಕಕ್ಕೆ ಇಲ್ಲ. ಬಸವಕಲ್ಯಾಣದಲ್ಲಿ ಜೆಡಿಎಸ್ ನೋಡಿ ಮತ ಹಾಕಿಲ್ಲ. ಅಲ್ಲಿನ ವ್ಯಕ್ತಿಯ ನೋಡಿ ಮತ ಹಾಕಿದ್ದಾರೆ. ಇದರಿಂದ ಅಲ್ಲಿ ಬಿಜೆಪಿ ಗೆಲ್ಲಲು ಸಹಾಯವಾಗಿದೆ ಎಂದು ಜಮೀರ್ ತಿಳಿಸಿದರು.