ಬೆಂಗಳೂರು: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಸೋಮವಾರ ಬೆಳಿಗ್ಗೆ ಆನಂದ್ ಸಿಂಗ್ ಡಿಕೆಶಿ ಅವರನ್ನು ಭೇಟಿ ಮಾಡಿದರು.
ಈ ಕುರಿತು ಡಿಕೆಶಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿ ಹಾಲಿ ಸಚಿವರೊಬ್ಬರು ವಿರೋಧ ಪಕ್ಷದ ಮುಖಂಡನ ಮನೆಗೆ ತಾವಾಗಿಯೇ ಬಂದಿರುವುದು ವಿಶೇಷವಾಗಿದೆ,ಆದರೆ ಇದರಲ್ಲಿ ರಾಜಕೀಯ ವಿಶೇಷವೇನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ವಿಶೇಷವಿದ್ದಿದ್ದರೆ ಬೇರೆ ಎಲ್ಲಾದರೂ ಅಥವಾ ರೆಸಾರ್ಟ್, ಹೋಟೆಲ್ ಗಳಲ್ಲಿ ಮಾತನಾಡಬಹುದು ಹೀಗೆ ಮನೆಗೆ ಬಂದು ಯಾರೂ ರಾಜಕೀಯ ಮಾತನಾಡುವುದಿಲ್ಲ, ಆನಂದ್ ಸಿಂಗ್ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದು ಹೇಳಿದರು.
ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿ ಇದೊಂದು ಸೌಜನ್ಯಯುತ ಭೇಟಿ ವಿಶೇಷ ಏನೂ ಇಲ್ಲ ಎಂದಿದ್ದಾರೆ.
ಡಿಕೆಶಿ,ಆನಂದ್ ಸಿಂಗ್ ಏನೇ ಸಬೂಬು ಹೇಳಿದರೂ ಇವರಿಬ್ಬರ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳಿಸಿರುವುದಂತೂ ನಿಜ.

