ಬೆಂಗಳೂರು:ರಾಜ್ಯ ಸರ್ಕಾರದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಒಬ್ಬರನ್ನು ಬಿಟ್ಟರೆ ಬೇರೆ ಯಾವ ಸಚಿವರೂ ಸರಿ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಸಚಿವರು ದುಡ್ಡಿನ ದಂಧೆ ಮಾಡಲು ಬಾಗಿಲು ತೆಗೆದುಕೊಂಡು ಕೂತಿದ್ದಾರೆ ಎಂದು ಕಿಡಿ ಕಾರಿದರು.
ಪೊಲೀಸ್ ಇಲಾಖೆಯಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ ಎಂದು ದೂರಿದ ಎಚ್ ಡಿ ಕೆ
ಸಚಿವ ಎಂಟಿಬಿ ನಾಗರಾಜ್ ಯಾಕೆ ಹಾಗೆ ಹೇಳಿದರು, ಅದರ ಹಿಂದೆ ಏನೆಲ್ಲಾ ನಡೆದಿದೆ ಎಂಬುದೆಲ್ಲಾ ನನಗೆ ಗೊತ್ತಿದೆ ಎಂದು ಹೇಳಿದರು.
ಕೆ ಆರ್ ಪುರಂ ಠಾಣೆ ಇನ್ಸ್ ಪೆಕ್ಟರ್ ನಂದೀಶ್ 80 ಲಕ್ಷ ರೂಪಾಯಿ ಕೊಟ್ಟು ಮೂರು ತಿಂಗಳೂ ಆಗಿರಲಿಲ್ಲ. ಅಷ್ಟರಲ್ಲಿ ಅವರನ್ನು ಅಮಾನತು ಮಾಡಿದರು. ಅದರ ನೋವಿನಲ್ಲಿ ಅವರಿಗೆ ಹೃದಯಾಘಾತ ಆಗಿರಬಹುದು ಎಂದು ತಿಳಿಸಿದರು.
ಅಲ್ಲಿನ ಶಾಸಕರಿಗೆ ಎಷ್ಟು ಹೋಗಿದೆ, ಯಾರು ಯಾರಿಗೆ ಎಷ್ಟು ಹೋಗಿದೆ. ಎಲ್ಲದರ ಬಗ್ಗೆ ತನಿಖೆ ಮಾಡಿಸಲಿ ಸತ್ಯ ಹೊರಬರಲಿದೆ ಎಂದು ಒತ್ತಾಯಿಸಿದರು.
ಜೆಸಿಬಿಯಿಂದ ಹಣ ಬಾಚುತ್ತಿರುವ ಸರ್ಕಾರ: ಕೆಲ ಸಚಿವರು ಎಷ್ಟೇ ಶ್ರೀಮಂತರಿದ್ದರೂ ಅವರಿಗೆ ಹಣದ ದಾಹ ಕಡಿಮೆಯಾಗಿಲ್ಲ. ಎಷ್ಟು ಸಾಧ್ಯವೋ ಅಷ್ಟನ್ನೂ ಬಾಚುತ್ತಿದ್ದಾರೆ.
ಈ ಸರಕಾರದಲ್ಲಿ ಯಾರೂ ಕೈನಲ್ಲಿ ಹಣ ಬಾಚುತ್ತಿಲ್ಲ, ಜೆಸಿಬಿಯಲ್ಲಿ, ಹಿಟಾಚಿಯಲ್ಲಿ ಬಾಚುತ್ತಿದ್ದಾರೆ ಎಂದು ಕುಮಾರಸ್ವಾಮಿ ಗುಡುಗಿದರು.
ಆದೇನೇನು ತನಿಖೆ ಮಾಡುತ್ತಾರೋ ಮಾಡಲಿ ನೋಡೋಣ,ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ಈಗಾಗಲೇ ಮುಖ್ಯಮಂತ್ರಿಗಳು ತನಿಖೆ ಮಾಡಿಸುವುದಾಗಿ ಹೇಳಿದ್ದಾರೆ. ಆದರೆ, ಏನು, ಯಾವ ರೀತಿ ತನಿಖೆ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.
ನಂದೀಶ್ ಅವರ ಸಾವು ಪೊಲೀಸ್ ಇಲಾಖೆಯಲ್ಲಿ ನಡೆಯುವ ಕರಾಳ ಘಟನೆಗಳಿಗೆ ಕನ್ನಡಿ ಹಿಡಿದಂತೆ ಇದೆ.ಆದುದರಿಂದ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ಮಾಡಬೇಕು ಎಂದು ಎಚ್ ಡಿ ಕೆ ಒತ್ತಾಯಿಸಿದರು.
ಕೋಲಾರದಿಂದ ಸ್ಪರ್ಧೆ ಮಾಡಲ್ಲ: ಕೋಲಾರದಿಂದ ನಾನು ಸ್ಪರ್ಧೆ ಮಾಡುವುದಿಲ್ಲ. ಚನ್ನಪಟ್ಟಣದಿಂದಲೇ ಸ್ಪರ್ಧಿಸುತ್ತೇನೆ ಎಂದು ಹೆಚ್.ಡಿ.ಕೆ ಇದೇ ವೇಳೆ ಸ್ಪಷ್ಟಪಡಿಸಿದರು.
ಕಾರ್ಯಕರ್ತರು ನನ್ನ ಮೇಲಿನ ಅಭಿಮಾನಕ್ಕೆ ಕೋಲಾರದಿಂದ ಸ್ಪರ್ಧೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ ಆದರೆ ನಾನು ಈ ಮೊದಲೇ ಹೇಳಿದಂತೆ ಚನ್ನಪಟ್ಟಣದಲ್ಲಿಯೇ ಸ್ಪರ್ಧಿಸಿತ್ತೇನೆ ಎಂದು ಹೇಳಿದರು.
ಕೋಲಾರದ ಜನರ ಸಮಸ್ಯೆ ಏನಿದೆ ಎಂಬುದು ನನಗೆ ಗೊತ್ತಿದೆ. ಕೋಲಾರದಲ್ಲಿ ನಮ್ಮ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳು ಇದ್ದಾರೆ. ನಾನೇ ಹೋಗಿ ಸ್ಪರ್ಧೆ ಮಾಡಬೇಕು ಅಂತ ಇಲ್ಲ. ಎಲ್ಲಾ ಮುಖಂಡರ ಜತೆ ಚರ್ಚೆ ಮಾಡಿ ಸಮಸ್ಯೆ ಪರಿಹಾರ ಮಾಡುತ್ತೇನೆ ಎಂದು ತಿಳಿಸಿದರು.
ನವೆಂಬರ್ 1ಕ್ಕೇ ಮೊದಲ ಪಟ್ಟಿ: ನವೆಂಬರ್ 1ರಂದು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದ ಹೆಚ್ ಡಿಕೆ, ನಾವು ಎಲ್ಲರಿಗಿಂತ ಮೊದಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಬೇರೆ ಪಕ್ಷಗಳಲ್ಲಿ ಅನೇಕ ಪಟ್ಟಿಗಳಿವೆ. ಅವುಗಳ ಪಾಲಿಗೆ ಪಟ್ಟಿಗಳೇ ಫಜೀತಿ ಆಗಲಿವೆ.
ಈಗಾಗಲೇ 123 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಫೈನಲ್ ಮಾಡಿದ್ದು, ಅವರಿಗೆಲ್ಲ ಕೆಲಸ ಪ್ರಾರಂಭ ಮಾಡಲು ಹೇಳಿದ್ದೇನೆ ಎಂದು ತಿಳಿಸಿದರು ಕುಮಾರಸ್ವಾಮಿ.

