ಕಲಬುರ್ಗಿ: ಸರ್ಕಾರದ ಬೆಂಬಲವಿಲ್ಲದೆ ಹಗರಣಗಳಲ್ಲಿ ಯಾರೂ ಕಿಂಗ್ ಪಿನ್ ಆಗಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದರು.
ಕಲಬುರ್ಗಿಯಲ್ಲಿ ಶನಿವಾರ ಡಿಕೆಶಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮುಖ್ಯಮಂತ್ರಿಗಳು, ಗೃಹಸಚಿವರು, ಡಿಜಿ ಸೇರಿದಂತೆ ಎಲ್ಲ ಅಧಿಕಾರಗಳ ಆಶೀರ್ವಾದ ಇಲ್ಲದೆ, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಉತ್ತರ ಪತ್ರಿಕೆ, ಒಎಂಆರ್ ತಿದ್ದಲು ಆಗುವುದಿಲ್ಲ. ಈ ಹಗರಣದಲ್ಲಿ ಪ್ರತಿ ಅಕ್ರಮವು ಸರ್ಕಾರದ ಬೆಂಬಲದಿಂದಲೇ ಆಗಿದೆ ಎಮದವರು ಆರೋಪಿಸಿದರು.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ವಿಶ್ವವಿದ್ಯಾಲಯಗಳಲ್ಲಿ ಉಪಕುಲಪತಿಗಳ ನೇಮಕಕ್ಕೆ 5 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಇನ್ನು ಪತ್ರಿಕೆಗಳಲ್ಲಿ ಕಡಿಮೆ ಅಂಕ ಪಡೆದಿದ್ದರೂ ಹೆಚ್ಚಿನ ಅಂಕ ನೀಡಿರುವ ವರದಿ ಬಂದಿದೆ. ಈ ಸರ್ಕಾರ ಎಲ್ಲ ನೇಮಕಾತಿಯಲ್ಲಿ ಅಕ್ರಮ, ಭ್ರಷ್ಟಾಚಾರ ನಡೆಸಿ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ ಎಂದರು.
ಈ ಭ್ರಷ್ಟ ಹಾಗೂ ದುಷ್ಟ ಸರ್ಕಾರವನ್ನು ಹೊರ ಹಾಕುವುದು ಕಾಂಗ್ರೆಸ ಪಕ್ಷದ ಗುರಿ ಎಂದವರು ಹೇಳಿದರು.
ಇನ್ನು ನಮ್ಮ ಯಾತ್ರೆ ಬಸ್ ಯಾತ್ರೆ ಅಲ್ಲ. ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ಇದು ರಾಜ್ಯದ ಪ್ರಜೆಗಳ ಯಾತ್ರೆ ಎಂದರು.

