ಮೈಸೂರು: ಮೈಸೂರಿನ ರಾಘವೇಂದ್ರ ಬಡಾವಣೆಯಲ್ಲಿ ದೇವಸ್ಥಾನದ ಅಭಿವೃದ್ದಿಗಾಗಿ ಮುಸ್ಲಿಂ ಸಮುದಾಯದ ಮುಖಂಡರು ಕೈಜೋಡಿಸಿ ಭಾವೈಕ್ಯತೆ ಮೆರೆದು ಮಾದರಿಯಾಗಿ ದ್ದಾರೆ.
ಶಿಥಿಲಗೊಂಡಿದ್ದ ದೇವಸ್ಥಾನಕ್ಕೆ ಪುನಶ್ವೇತನ ನೀಡಲು ಹಿಂದು ಮುಸ್ಲಿಂ ಸಮುದಾಯದ ಮುಖಂಡರು ಒಂದಾಗಿ ವಿಶೇಷ ರೂಪ ನೀಡಿದ್ದಾರೆ.ಎರಡು ಸಮುದಾಯದ ಒಗ್ಗಟ್ಟಿನಿಂದ ಅಭಿವೃದ್ದಿಯಾದ ಶನೇಶ್ವರ ಆದಿಶಕ್ತಿ ದೇವಾಲಯ ಇಂದು ಕಂಗೊಳಿಸುತ್ತಿದೆ.
ರಾಘವೇಂದ್ರ ಬಡಾವಣೆ 10 ನೇ ಕ್ರಾಸ್ ನಲ್ಲಿ ಸುಮಾರು 25 ವರ್ಷಗಳ ಹಿಂದೆ ಗುಡ್ಡಪ್ಪ ಸುಂದರಸ್ವಾಮಿ ಅವರು ಜಾಗ ಖರೀದಿಸಿ ಶನೇಶ್ವರ, ಆದಿಶಕ್ತಿ ದೇವಾಲಯ ನಿರ್ಮಾಣ ಮಾಡಿದ್ದರು.ಶಿವರಾತ್ರಿ ಹಾಗೂ ಸಂಕ್ರಾಂತಿ ಹಬ್ಬಗಳಂದು ಈ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಇತ್ತೀಚಿನ ದಿನಗಳಲ್ಲಿ ದೇವಾಲಯದ ಗೋಡೆಗಳು ಶಿಥಿಲಗೊಂಡಿದ್ದವು.
ದೇವಾಲಯದ ಅಭಿವೃದ್ದಿಗೆ ಸ್ಥಳೀಯ ಮುಖಂಡರಾದ ಫೈರೋಜ್ ಖಾನ್ ಹಾಗೂ ಪದ್ಮನಾಭ ಅವರು ಮುಂದೆ ಬಂದರು.
ಸುಮಾರು ಒಂದು ತಿಂಗಳಿನಿಂದ ಕಾಮಗಾರಿ ನಡೆದಿದ್ದು,ಸ್ಥಳೀಯ ಹಿಂದು ಹಾಗೂ ಮುಸ್ಲಿಂ ಮುಖಂಡರ ನೆರವಿನಿಂದ ದೇವಾಲಯಕ್ಕೆ ವಿಶೇಷ ರೂಪ ನೀಡಿ,ಸಾಕಷ್ಟು ಮೆರುಗು ತಂದಿದ್ದಾರೆ.
ದೇವಾಲಯದ ಕಟ್ಟಡದ ಮೇಲೆ ಗೋಪುರ ನಿರ್ಮಿಸಲಾಗಿದೆ.ಗೋಪುರದಲ್ಲಿ ಸ್ಥಾಪಿಸಲು ವಿಗ್ರಹಗಳೂ ಸಿದ್ದವಾಗಿವೆ.ಅಭಿವೃದ್ದಿಯಾದ ದೇವಾಲಯದಲ್ಲಿ ಶಿವರಾತ್ರಿಯಂದು ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆಗಳು ನೆರವೇರಿದವು.
ದೇವಾಲಯದ ಅಭಿವೃದ್ದಿಗೆ ಹಿಂದು ಸಮುದಾಯದ ಜೊತೆ ಕೈಜೋಡಿಸಿದ ಮುಸ್ಲಿಂ ಜನಾಂಗದ ಮುಖಂಡರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಯಿತು.
ಯುಗಾದಿ ಹಬ್ಬದ ಸಮೀಪದ ಶುಭಗಳಿಗೆಯಂದು ಶನೇಶ್ವರ ಹಾಗೂ ಆದಿಶಕ್ತಿ ವಿಗ್ರಹಗಳನ್ನ ಸ್ಥಾಪಿಸಿ ಗೋಪುರ ಉದ್ಘಾಟನೆಯಾಗಲಿದೆ.
ಹಿಂದು ಮುಸ್ಲಿಂ ಸಮುದಾಯದ ಮುಖಂಡರ ಉತ್ತಮ ಕಾರ್ಯಕ್ಕೆ ಇಡೀ ಬಡಾವಣೆಯ ಜನ ಶ್ಲಾಘಿಸಿದ್ದಾರೆ.

