ಕಾಂಗ್ರೆಸ್ ಸರ್ಕಾರದಿಂದ ಜಾತಿಗಳ ನಡುವೆ ವಿಷಬೀಜ ಬಿತ್ತುವ ಕೆಲಸ -ವಿಜಯೇಂದ್ರ

ಬೆಂಗಳೂರು: ರಾಜ್ಯ ಸರ್ಕಾರಗಳಿಗೆ ಜಾತಿ ಜನಗಣತಿ ಮಾಡುವ ಅಧಿಕಾರ ಇಲ್ಲ,ಅದು ಗೊತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಜಾತಿಗಳ ನಡುವೆ ವಿಷ ಬೀಜ ಬಿತ್ತಲು ಮುಂದಾಗಿದೆ ಎಂದು ವಿಜಯೇಂದ್ರ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಜನಗಣತಿ ಜತೆಗೆ ಜಾತಿ ಜನಗಣತಿಯೂ ಮಾಡುವ ನಿರ್ಧಾರ ಬಹಳ ಉತ್ತಮ ನಿರ್ಧಾರ ಎಂದು ಹೇಳಿದರು.

1931 ರ ನಂತರ ದೇಶದಲ್ಲಿ ಜಾತಿ ಜನಗಣತಿ ನಡೆದಿರಲಿಲ್ಲ. ಎಲ್ಲ ಸಮುದಾಯಗಳಿಗೂ ನ್ಯಾಯ ಸಿಗಬೇಕು ಎಂಬುದು ಮೋದಿಯವರ ಉದ್ದೇಶ. ಎಲ್ಲರೂ ಈ ನಿರ್ಧಾರ ಸ್ವಾಗತ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಟೀಕಿಸಿದರು.

ಕೇಂದ್ರದ ನಿರ್ಧಾರ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಅಚ್ಚರಿ ತಂದಿದೆ ಎಂದರು.

ಖರ್ಗೆಯವರೇ ಹೇಳಿದ್ದಾರೆ ಇದು ಔಟ್‌ಡೇಟೆಡ್ ವರದಿ ಅಂತಾ. ಈಗಲಾದರೂ ರಾಜ್ಯದ ಜಾತಿ ಜನಗಣತಿಗೆ ಅಂತ್ಯ ಹಾಡಲಿ ಎಂದು ವಿಜಯೇಂದ್ರ ಒತ್ತಾಯಿಸಿದರು.

ಸಿದ್ದರಾಮಯ್ಯ‌ ಅವರಿಗೆ ಭಗವಂತ ಬುದ್ಧಿ ಕೊಡಲಿ, ಕೇಂದ್ರದ ಪರ ಸಿದ್ದರಾಮಯ್ಯ ನಿಲ್ಲಲಿ ಎಂದು ತಿಳಿಸಿದರು.