ವಿಚ್ಛೇದನ ಕೋರಿ ಕೋರ್ಟ್ ಮೊರೆ ಹೋದ ಪತಿಗೆ ಕೊಲೆ ಬೆದರಿಕೆ ಹಾಕಿದ ಪತ್ನಿ

ಮೈಸೂರು: ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ಪತಿಗೆ ಪತ್ನಿ ಕೊಲೆ ಬೆದರಿಕೆ ಹಾಕಿರುವ ಪ್ರಕರಣ ನಗರದಲ್ಲಿ ನಡೆದಿದೆ.

ಈ‌ ಬಗ್ಗೆ ಪತ್ನಿ, ಅತ್ತೆ ಸೇರಿದಂತೆ 6 ಮಂದಿ ವಿರುದ್ದ ಪತಿ ಮೈಸೂರಿನ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಆಗಿರುವ ರಾಜೇಶ್ ಕುಮಾರ್ ಅವರು ಪತ್ನಿ ಉಷಾ,ಅತ್ತೆ ರಾಜಲಕ್ಷ್ಮಿ,ನಾದಿನಿ ವರ್ಷ,ಸುಂದರಮ್ಮ ಸೇರಿದಂತೆ 6 ಮಂದಿ ವಿರುದ್ಧ ಕೊಲೆ ಬೆದರಿಕೆ ಹಾಕಿದ್ದಾರೆಂದು ಪ್ರಕರಣ ದಾಖಲಿಸಿದ್ದಾರೆ.

2017 ರಲ್ಲಿ ರಾಜೇಶ್ ಕುಮಾರ್ ಹಾಗೂ ಉಷ ಮದುವೆ ಆಗಿದೆ.ಮ್ಯಾಟ್ರಿಮೋನಿ ಮೂಲಕ ಪರಿಚಯವಾಗಿ ಮದುವೆ ಆಗಿದೆ.

ರಾಜೇಶ್ ಕುಮಾ‌ರ್ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಉಷಾ ಆಚಾರಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಮದುವೆ ವೇಳೆ ಉಷಾ ತಾನು ಪರಿಶಿಷ್ಟ ಜಾತಿಗೆ ಸೇರಿದವಳೆಂದು ಸುಳ್ಳು ಹೇಳಿ ನಂಬಿಸಿದ್ದಾರೆಂದು ರಾಜೇಶ್ ಕುಮಾ‌ರ್ ಆರೋಪಿಸಿದ್ದಾರೆ.

ಮದುವೆ ಆದ ನಂತರ ಉಷಾ ಜಾತಿ ಬಯಲಾಗಿದೆ.ಈ ವೇಳೆ ಜಾತಿವಿಚಾರದಲ್ಲಿ ಉಷಾ ಹಾಗೂ ಅತ್ತೆ ರಾಜಲಕ್ಷ್ಮಿ ನಿಂದನೆ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ.ಹಾಗಾಗಿ ಬೇಸತ್ತ ರಾಜೇಶ್ ಕುಮಾರ್ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ಪ್ರತಿತಿಂಗಳು 25 ಸಾವಿರ ಜೀವನಾಂಶ ಪಾವತಿಸುತ್ತಾ ಬಂದಿದ್ದಾರೆ.ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಅರ್ಜಿ ತಿರಸ್ಕೃತವಾಗಿದ್ದು ಹೈಕೋರ್ಟ್ ಮೊರೆ ಹೋಗಿದ್ದಾರೆ.

ಈ ಬೆಳವಣಿಗೆ ನಂತರ ಉಷಾ,ರಾಜಲಕ್ಷ್ಮಿ, ಸುಂದರಮ್ಮ, ವರ್ಷಾ ಅವರು ಮನೆಗೆ ಬಂದು ಬಾಗಿಲು ಒಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೇಸ್ ಹಾಕಿದ ವಿಚಾರವನ್ನ ಪ್ರಸ್ತಾಪಿಸಿ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ರಾಜೇಶ್ ಕುಮಾರ್ 6 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.