ಬೇಹುಗಾರಿಕೆ: ಜ್ಯೋತಿ ಮಲ್ಹೋತ್ರಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ಹಿಸಾರ್: ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಯಾಗಿರುವ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಯಾಗಿದೆ.

ನ್ಯಾಯಾಂಗ ಬಂಧನ ಅವಧಿಯನ್ನು ಸ್ಥಳೀಯ ನ್ಯಾಯಾಲಯ ಸೋಮವಾರ ವಿಸ್ತರಿಸಿದ್ದು, ಪ್ರಕರಣದ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿದೆ.

ಜ್ಯೋತಿ ಮಲ್ಹೋತ್ರಾ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಿಸಾರ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಪ್ರಥಮ ದರ್ಜೆ) ಸುನಿಲ್ ಕುಮಾರ್ ಅವರ ಮುಂದೆ ಹಾಜರಾಗಿದ್ದರು. ನ್ಯಾಯಾಲಯ ಇದೀಗ ಅವರ ನ್ಯಾಯಾಂಗ ಬಂಧನವನ್ನು ಎರಡು ವಾರಗಳವರೆಗೆ ವಿಸ್ತರಿಸಿದೆ.

ಈ ವಿಷಯವನ್ನು ಜ್ಯೋತಿ ಮಲ್ಹೋತ್ರಾ ಅವರ ವಕೀಲ ಕುಮಾರ್ ಮುಖೇಶ್ ತಿಳಿಸಿದ್ದಾರೆ.

ಹಿಸಾರ್ ಪೊಲೀಸರು ಮೇ 16ರಂದು ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಮಲ್ಹೋತ್ರಾ ಅವರನ್ನು ಬಂಧಿಸಿದ್ದರು.

ನಂತರ ನ್ಯಾಯಾಲಯವು ಆಕೆಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತು. ಕಸ್ಟಡಿ ಅವಧಿ ಪೂರ್ಣಗೊಂಡ ನಂತರ, ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ಮನವಿಯ ಮೇರೆಗೆ ನ್ಯಾಯಾಲಯವು ಅದನ್ನು ನಾಲ್ಕು ದಿನಗಳವರೆಗೆ ವಿಸ್ತರಿಸಿತು. ಮೇ 26 ರಂದು ನ್ಯಾಯಾಲಯವು ಆಕೆಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನ ಉದ್ಯೋಗಿಯಾಗಿದ್ದ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಸೇರಿದಂತೆ ಪಾಕ್ ಪ್ರಮುಖ ಏಜೆಂಟರ್ ಜೊತೆಗೆ ಜ್ಯೋತಿ ಮಲ್ಹೋತ್ರಾ ನಿರಂತರ ಸಂಪರ್ಕದಲ್ಲಿದ್ದರು.